ಮೈಸೂರು: ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಮೈಸೂರು ಮಹಾನಗರ ಪಾಲಿಕೆ ತೆರಿಗೆ ಸಂಗ್ರಹಕ್ಕೆ ವಿನೂತನ ಕ್ರಮ ಅನುಸರಿಸಿದೆ.
ಮೇಯರ್, ಉಪಮೇಯರ್ ಅಲ್ಲದೆ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಜತೆಯಾಗಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ. ಎಲ್ಲರೂ ಪ್ರತ್ಯೇಕ ತಂಡಗಳಾಗಿ ಮನೆಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಅಂಗಡಿಗಳಿಗೆ ತೆರಳಿ ಬಾಕಿ ತೆರಿಗೆ ವಸೂಲಿ ಮಾಡಲಿದ್ದಾರೆ.
‘ಪಾಲಿಕೆಯ ವಿವಿಧ ವಲಯಗಳ ಎಂಜಿನಿಯರ್ಗಳು, ರೆವೆನ್ಯೂ ಇನ್ಸ್ಪೆಕ್ಟರ್ಗಳು ಮತ್ತು ಪಾಲಿಕೆ ಸದಸ್ಯರು ತೆರಿಗೆ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರದಿಂದ 15 ದಿನಗಳವರೆಗೆ ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ಅಭಿಯಾನ ನಡೆಯಲಿದೆ. ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ’ ಎಂದು ಮೇಯರ್ ತಸ್ನೀಂ ತಿಳಿಸಿದರು.
‘ಅರಸು ರಸ್ತೆ ಒಳಗೊಂಡಂತೆ ಪ್ರಮುಖ ವಾಣಿಜ್ಯ ಕೇಂದ್ರಗಳಿಗೆ ನಾನು, ಉಪಮೇಯರ್ ಅಲ್ಲದೆ ಪಾಲಿಕೆ ಆಯುಕ್ತರನ್ನೊಳಗೊಂಡ ತಂಡ ಭೇಟಿ ನೀಡಲಿದೆ. ಇತರ ಕಡೆಗಳಲ್ಲಿ ಅಧಿಕಾರಿಗಳ ಜತೆ ಪಾಲಿಕೆ ಸದಸ್ಯರು ಕೈಜೋಡಿಸಲಿದ್ದಾರೆ’ ಎಂದರು.
ಕೋವಿಡ್ ಕಾರಣದಿಂದ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ತಲುಪಲು ಆಗಿಲ್ಲ. ಇದರಿಂದ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗಿದೆ. ಬಾಕಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಗಮನ ನೀಡಲಾಗಿದೆ ಎಂದು ಹೇಳಿದರು.