ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನ ಗೆಂಡತ್ತೂರು ಬಳಿಯ ಜಕ್ಕಹಳ್ಳಿಮಾಳ ಗ್ರಾಮದಿಂದ ಶನಿವಾರ ಬೆಳಗಿನ ಜಾವ ಗರ್ಭಿಣಿ ಮಂಜುಳಾ (30) ಅವರನ್ನು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗಲೇ, ಆಂಬುಲೆನ್ಸ್ನಲ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ತಾಯಿ–ಮಗು ಕ್ಷೇಮವಾಗಿದ್ದಾರೆ.
ಪಟ್ಟಣದಿಂದ 35 ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ ತೆರಳಿ ಆಸ್ಪತ್ರೆಗೆ ಕರೆರುತ್ತಿದ್ದಾಗ ಬೆಳಗಿನ ಜಾವ 4ರ ವೇಳೆಗೆ ಶಿರಮಳ್ಳಿ ಗ್ರಾಮದ ಬಳಿ ಹೆರಿಗೆ ನೋವು ಹೆಚ್ಚಾಗಿತ್ತು. ಕೂಡಲೇ ಶುಶ್ರೂಷಕ ಡಿ.ಕೆ. ಸುರೇಶ್ ಮತ್ತು ವಾಹನ ಚಾಲಕ ಪ್ರಸನ್ನಕುಮಾರ್ ಹೆರಿಗೆ ಮಾಡಿದರು. ನಂತರ ತಾಯಿ ಮತ್ತು ಮಗುವನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿದರು. ಮಗುವಿನ ತೂಕ ಸುಮಾರು 3.250 ಕೆ.ಜಿ ಇದೆ.
‘ಕಷ್ಟದಲ್ಲಿದ್ದಾಗ ಸಹಾಯ ಮಾಡುವವರೇ ನಿಜವಾದ ದೇವರು. ನನ್ನ ಮಡದಿ ಮತ್ತು ಮಗು ಆರೋಗ್ಯವಾಗಿದ್ದು, ತುರ್ತು ನೆರವು ನೀಡಿದ ಆರೋಗ್ಯ ಸಿಬ್ಬಂದಿ ಮತ್ತು ವಾಹನ ಚಾಲಕರಿಗೆ ಧನ್ಯವಾದಗಳು‘ ಎಂದು ಮಂಜುಳಾ ಅವರ ಪತಿ ಶಂಕರ್ ತಿಳಿಸಿದರು.