ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸು ಸಮಾಜ ನಾಡಿಗೆ ಮಾದರಿ: ಡಾ.ಡಿ.ತಿಮ್ಮಯ್ಯ

‘ಸಾಧಕರಿಗೆ ಧ್ವನಿಕೊಟ್ಟ ದಣಿ’ ಪ್ರಶಸ್ತಿ ಪ್ರದಾನ ಸಮಾರಂಭ
Published 1 ಸೆಪ್ಟೆಂಬರ್ 2023, 5:17 IST
Last Updated 1 ಸೆಪ್ಟೆಂಬರ್ 2023, 5:17 IST
ಅಕ್ಷರ ಗಾತ್ರ

ಮೈಸೂರು: ‘ಅರಸು ಸಮಾಜವು ತನ್ನ ಸ್ವಾರ್ಥರಹಿತ ಚಿಂತನೆಗಳು ಹಾಗೂ ಪರೋಪಕಾರಿ ಕೆಲಸಗಳ ಮೂಲಕ ನಾಡಿಗೆ ಮಾದರಿ ಆಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಅಭಿಪ್ರಾಯಪಟ್ಟರು.

ಅನ್ವೇಷಣಾ ಸೇವಾ ಟ್ರಸ್ಟ್ ಹಾಗೂ ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಗರದ ಎಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಧ್ವನಿಕೊಟ್ಟ ದಣಿ ಡಿ.ದೇವರಾಜ ಅರಸು ಅವರ 108ನೇ ಜನ್ಮದಿನ ಸಂಭ್ರಮ ಹಾಗೂ ಸಾಧಕರಿಗೆ ಧ್ವನಿಕೊಟ್ಟ ದಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್ ದೇಶಕ್ಕೆ ಮಾದರಿಯಾಗಿದ್ದ ಅರಸರಾಗಿದ್ದರು. ಅದೇ ಹಾದಿಯಲ್ಲಿ ಸಾಗಿದ್ದ ದೇವರಾಜ ಅರಸು ಬಡವರು, ದೀನ ದುರ್ಬಲರು, ಅಸಂಘಟಿತ ಕಾರ್ಮಿಕರು, ಮಹಿಳೆಯರು ಹಾಗೂ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದರು’ ಎಂದು ತಿಳಿಸಿದರು.

‘ದೇವರಾಜ ಅರಸು ಒಂದು ಸಮುದಾಯಕ್ಕೆ ಕೆಲಸ ಮಾಡಲಿಲ್ಲ. ಎಲ್ಲ ವರ್ಗದವರಿಗೆ ಪ್ರಯೋಜನ ಆಗುವಂತಹ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಜೀತ ಪದ್ಧತಿ ನಿರ್ಮೂಲನೆ, ಮಲ ಹೊರುವ ಪದ್ಧತಿ ನಿಷೇಧ, ಉಳುವವನೇ ಭೂಮಿಯ ಒಡೆಯ ಮೊದಲಾದ ಕಾಯ್ದೆಗಳ ಜಾರಿ ಅವರ ಕ್ರಾಂತಿಕಾರಕ ನಿರ್ಣಯಗಳಾಗಿವೆ’ ಎಂದು ಬಣ್ಣಿಸಿದರು.

ತುಳಿತಕ್ಕೆ ಒಳಗಾದರಿಗೆ ನೆರವು: ಭಾರತ ಸ್ಕೌಟ್ಸ್‌ ಅಂಡ್ ಗೈಡ್ಸ್ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ‘ದೇವರಾಜ ಅರಸು ಒಂದು ಜನಾಂಗದ ನಾಯಕರಲ್ಲ. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರಿಗೆ ಅವಕಾಶ ಸಿಗಬೇಕಿದೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಅರಸು ಎಂದೂ ಮುಂದೆ ಇದ್ದರು. 1967ರಲ್ಲಿ ಅರಸು ಅವರನ್ನು ಮಂತ್ರಿಮಂಡಲದಿಂದ ಕೈಬಿಡಲಾಗಿತ್ತು. ಕಾಂಗ್ರೆಸ್ ಇಬ್ಭಾಗ ಆದಾಗ ಅರಸು ಇಂದಿರಾ ಪರ ಗುರುತಿಸಿಕೊಂಡಿದ್ದರು. 1978ರಲ್ಲಿ 186 ಸೀಟು ಗೆಲ್ಲಲು ಅರಸು ಪರಿಶ್ರಮ ಕಾರಣವಾಗಿತ್ತು. ಅರಸು ಅವರು ಸಮಾಜದ ಎಲ್ಲ ವರ್ಗದ ಜನರನ್ನು ಗುರುತಿಸಿ ಅವಕಾಶ ನೀಡಿದ್ದರು. ಎಲ್.ಜಿ. ಹಾವನೂರ ವರದಿ ಆಧರಿಸಿ ಮೀಸಲಾತಿ ಜಾರಿಗೊಳಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರಂತಹ ನಾಯಕರನ್ನು ಅರಸು ಗುರುತಿಸಿದ್ದರು’ ಎಂದು ತಿಳಿಸಿದರು.

‘ತುರ್ತು ಪರಿಸ್ಥಿತಿ ತರುವಾಯ ದೇಶದ ಎಲ್ಲೆಡೆ ಕಾಂಗ್ರೆಸ್ ಸೋತರೂ ಕರ್ನಾಟಕದಲ್ಲಿ ಗೆಲ್ಲಲು ಅರಸು ಆಡಳಿತ ಕಾರಣ. ತುರ್ತು ಪರಿಸ್ಥಿತಿಯ ದುರ್ಬಳಕೆ ಮಾಡಿಕೊಳ್ಳದೇ ಅದನ್ನು ಬಡವರ ಪರವಾಗಿ ಉಪಯೋಗಿಸಿಕೊಂಡು ಜನಪರ ಕಾನೂನುಗಳನ್ನು ಜಾರಿಗೆ ತಂದರು’ ಎಂದು ವಿವರಿಸಿದರು.

‘ವಿಧಾನಸೌಧದಲ್ಲಿ ಪ್ರತಿಮೆ ನಿಲ್ಲಿಸಿದ್ದು ಬಿಟ್ಟರೆ ಅರಸು ಸ್ಮರಣೆ ಕಾರ್ಯ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಶಸ್ತಿ ಪ್ರದಾನ: ಲೋಕಸೇವಾ ಆಯೋಗದ ಸದಸ್ಯ ಎಚ್.ಜಿ.ಪವಿತ್ರ, ನೇತ್ರ ಚಿಕಿತ್ಸಾ ತಜ್ಞೆ ಕೆ.ಅನಸೂಯ ಗೋಪಾಲ್, ಛಾಯಾಗ್ರಾಹಕ ಅನುರಾಗ್ ಬಸವರಾಜು, ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ವಿ. ಹೆಗಡೆ, ಸಾಹಿತಿ ಎಸ್.ಉಮೇಶ್ ಹಾಗೂ ಉದ್ಯಮಿ ದೀಪಕ್ ಅರಸ್ ಅವರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕುವೆಂಪು ಭಾಷಾ ಭಾರತಿ ಮಾಜಿ ಅಧ್ಯಕ್ಷ ಪ್ರಧಾನ ಗುರುದತ್, ಮೈಸೂರು ಜಿಲ್ಲಾ ಸಣ್ಣ ಕೈಗಾರಿಕಾಗಳ ಸಂಘದ ಅಧ್ಯಕ್ಷ ಎ.ಎಸ್.ಸತೀಶ್, ಅನ್ವೇಷಣ ಸೇವಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಅಮರನಾಥರಾಜೇ ಅರಸ್, ಅಧ್ಯಕ್ಷ ಎಂ.ಜಿ.ಆರ್‌. ಅರಸ್‌, ಎಚ್.ಎಂ.ಟಿ. ಲಿಂಗರಾಜೇ ಅರಸ್ ಇದ್ದರು.

ಅರಸು ಜಯಂತಿ ನಾಲ್ಕು ಜಿಲ್ಲೆಗೆ ಸೀಮಿತವಾಗಿದ್ದು ಮುಂದಿನ ವರ್ಷ ರಾಜ್ಯದಾದ್ಯಂತ ಆಚರಣೆ ನಡೆಯಬೇಕು. ಮೈಸೂರು ಜಿಲ್ಲೆಯಲ್ಲಿ ಅರಸು ಪ್ರತಿಮೆ ನಿರ್ಮಿಸಬೇಕು
–ಎಂ.ಜಿ.ಆರ್. ಅರಸ್‌ ಅಧ್ಯಕ್ಷ ಅನ್ವೇಷಣ ಸೇವಾ ಟ್ರಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT