ಮೈಸೂರು: ‘ವರುಣ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹ 224 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾಡಿದರು.
‘ಕ್ಷೇತ್ರವನ್ನು ಮಾದರಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ದೇವಸ್ಥಾನಗಳ ಅಭಿವೃದ್ಧಿಗೆ ₹ 3.32 ಕೋಟಿ, ಚರ್ಚ್ಗಳಿಗೆ ₹ 1 ಕೋಟಿ, ಗ್ರಾಮ ಪರಿಮಿತಿ ರಸ್ತೆ ಹಾಗೂ ನಾಲಾ ಅಭಿವೃದ್ಧಿಗೆ ₹ 116 ಕೋಟಿ, ಜಿಲ್ಲಾ ಮುಖ್ಯರಸ್ತೆ ಹಾಗೂ ಸೇತುವೆ ಅಭಿವೃದ್ಧಿಗೆ ₹ 50 ಕೋಟಿ, ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿಗೆ ₹ 10 ಕೋಟಿ ನೀಡಲಾಗಿದೆ’ ಎಂದರು.
‘ಗರ್ಗೇಶ್ವರಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ₹ 1.25 ಕೋಟಿ, ಪ್ರಾಚ್ಯವಸ್ತು ಇಲಾಖೆಯಿಂದ ₹1.71 ಕೋಟಿ, ಶಾಲಾ ಕೊಠಡಿ ನಿರ್ಮಾಣ ಹಾಗೂ ದುರಸ್ತಿಗೆ ₹ 5.87 ಕೋಟಿ, ಸಮುದಾಯ ಭವನ ಹಾಗೂ ಬಸ್ ನಿಲ್ದಾಣ ಕಾಮಗಾರಿಗೆ ₹ 30 ಕೋಟಿ ಮಂಜೂರಾಗಿದೆ. ಇವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದಲ್ಲದೆ ₹ 620 ಕೋಟಿ ಕಾಮಗಾರಿಯ ಮಂಜೂರಾತಿಗೆ ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದು ವಿವರ ನೀಡಿದರು.
‘ಶಾಸಕರ ನಿಧಿಯಿಂದ ₹ 2 ಕೋಟಿ ಬಿಡುಗಡೆ ಮಾಡಲಾಗಿದೆ. 15 ಅಂಗವಿಕಲರಿಗೆ ಬ್ಯಾಟರಿ ಚಾಲಿತ ಸ್ಕೂಟರ್ಗಳನ್ನು ವಿತರಿಸಲಾಗಿದೆ. ಕಾರ್ಮಿಕ ಇಲಾಖೆಯಿಂದ 50 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿದ್ದೇವೆ’ ಎಂದು ತಿಳಿಸಿದರು.
‘ಬಡವರ ಪರ ಯಾರಿದ್ದಾರೆ ಎಂಬುದನ್ನು ಅರಿತು ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸಬೇಕು. ನಾವು ನೀಡುತ್ತಿರುವ ಸೌಲಭ್ಯಗಳನ್ನು ಬಿಟ್ಟಿ ಭಾಗ್ಯಗಳೆಂದು ಹೀಯಾಳಿಸುವವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಕೋರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ವರುಣ ಮಹೇಶ್, ಮಂಜುಳಾ ಮಂಜುನಾಥ್, ಎಂ.ಟಿ. ರವಿಕುಮಾರ್, ಮಹೇಂದ್ರ, ಕೃಷ್ಣಮೂರ್ತಿ, ಮುದ್ದುರಾಮೇಗೌಡ, ಚಿಕ್ಕದೇವಯ್ಯ, ದೇವರಾಜ್, ಅಭಿ, ವೆಂಕಟೇಶ್, ಬಿಇಒ ವಿವೇಕಾನಂದ, ರಾಜೇಶ್ ಜಾಧವ್ ಪಾಲ್ಗೊಂಡಿದ್ದರು.