ಮೈಸೂರು: ಬೆಳಕು ಸಂಸ್ಥೆ ವತಿಯಿಂದ ಇಲ್ಲಿನ ರಾಮಾನುಜ ರಸ್ತೆಯ ಜನಸೇವಾ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ‘ಬೀದಿಬದಿ ವ್ಯಾಪಾರಿಗಳಿಂದ ಪ್ರಧಾನಮಂತ್ರಿ ಅವರಿಗೆ ಕೃತಜ್ಞತಾ ಸಮಾವೇಶ’ದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ ಅವರು ಸಾಂಕೇತಿಕವಾಗಿ 300ಕ್ಕೂ ಅಧಿಕ ಮಂದಿಗೆ ಸಹಾಯಧನ ವಿತರಿಸಿದರು.
ನಂತರ ಮಾತನಾಡಿದ ಅವರು, ಪ್ರಯಾಣಿಕರ ಆಟೊ ಚಾಲಕರಿಗೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಹಾಯಧನ ಬಂದಿದೆ. ಸರಕು ಸಾಗಣೆ ಆಟೊ ಚಾಲಕರಿಗೆ ತಾಂತ್ರಿಕ ಅಡಚಣೆ ಉಂಟಾಗಿದ್ದು, ಅತಿ ಶೀಘ್ರದಲ್ಲಿ ಅದು ನಿವಾರಣೆ ಆಗಲಿದೆ. ಎಲ್ಲರಿಗೂ ಸಹಾಯಧನ ತಲುಪಲಿದೆ ಎಂದು ತಿಳಿಸಿದರು.
ಇದೇ ಸೇವಾಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದ 300ಕ್ಕೂ ಅಧಿಕ ಮಂದಿ ಬೀದಿಬದಿ ವ್ಯಾಪಾರಿಗಳಿಗೆ ತಲಾ ₹ 10 ಸಾವಿರ ಸಹಾಯಧನ ಬಂದಿದೆ. ಇನ್ನುಳಿದವರಿಗೂ ಅತಿ ಶೀಘ್ರದಲ್ಲಿ ಬರಲಿದೆ ಎಂದು ಭರವಸೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಕೆ.ಎಂ.ನಿಶಾಂತ್ ಮಾತನಾಡಿ, ‘ಇದೇ ಕೇಂದ್ರದಿಂದ 520 ಮಂದಿ ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ 300ಕ್ಕೂ ಅಧಿಕ ಮಂದಿಗೆ ಸಹಾಯಧನ ಬಿಡುಗಡೆಯಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 781 ಮಂದಿಗೆ ಈ ಹಣ ಬಂದಿದೆ’ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಸಂಚಾಲಕ ಎಂ.ಎನ್ ಧನುಷ್, ಆದಿಕರ್ನಾಟಕ ರಸ್ತೆ ಬದಿ ವ್ಯಾಪಾರಿಗಳ ಸಂಘದ ರವಿಕುಮಾರ್, ಬಿ ಜೆ ಪಿ ಮುಖಂಡರಾದ ವಾಣೀಶ್, ಜಯರಾಮ್, ಸುದರ್ಶನ್, ರಂಗನಾಥ್, ಪ್ರಸಾದ್, ಆಟೋಚಾಲಕರ ಸಂಘದ ನಂಜುಂಡಸ್ವಾಮಿ, ನಂಜಪ್ಪ ಇದ್ದರು.