ಕೆ.ಆರ್.ನಗರ ಜವರಮ್ಮ ಡಿ. 4ರಂದು ತಮ್ಮ ಮಗಳ ಮನೆಗೆ ಹೋಗಲು ನಗರ ಬಸ್ನಿಲ್ದಾಣದಲ್ಲಿ ನಿಂತಿದ್ದರು. ಇವರ ಬಳಿ ಬಂದ ವ್ಯಕ್ತಿಯೊಬ್ಬ ಮೊದಲಿಗೆ ತಮ್ಮ ಊರು ಯಾವುದು, ಎಷ್ಟು ಜನ ಮಕ್ಕಳು ಎಂದು ಮಾತಿಗೆ ಇಳಿದಿದ್ದಾನೆ. ನಂತರ, ಮನೆಯಲ್ಲಿ ಕಷ್ಟವಿದೆಯಾ, ಬಡವರಾ ಎಂದು ಕೇಳಿದ್ದಾನೆ. ಈತನನ್ನು ನಂಬಿದ ಜವರಮ್ಮ ಮನೆಯ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇದರ ಲಾಭ ಪಡೆದ ಆತ ಸರ್ಕಾರದಿಂದ ಈಗಲೇ ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ಕೆ.ಆರ್.ಆಸ್ಪತ್ರೆ ಆವರಣಕ್ಕೆ ಕರೆದುಕೊಂಡು ಬಂದಿದ್ದಾನೆ. ಮೈಮೇಲೆ ಚಿನ್ನವಿದ್ದರೆ ಸಾಲ ಕೊಡುವುದಿಲ್ಲ ಎಂದು ಹೇಳಿ ಜವರಮ್ಮ ಹಾಕಿದ್ದ 50 ಗ್ರಾಂ ತೂಕದ ಎರಡೆಳೆ ಚಿನ್ನದ ಸರ ಹಾಗೂ ₹ 5 ಸಾವಿರ ನಗದನ್ನು ಬಟ್ಟೆ ಬ್ಯಾಗಿಗೆ ಹಾಕಿಸಿದ್ದಾನೆ. ಸಾಲ ಕೊಡುವವರು ಬ್ಯಾಗ್ ಪರಿಶೀಲಿಸಿದರೆ ಕಷ್ಟ ಎಂದು ಹೇಳಿ ಎಳನೀರಿನ ಅಂಗಡಿಯೊಂದರಲ್ಲಿ ಇರಿಸಿ, ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದತ್ತ ಕರೆದುಕೊಂಡು ಬಂದು, ಅಲ್ಲೊಂದು ಕಡೆ ಸ್ವಲ್ಪ ಕುಳಿತಿರಿ ಬರುತ್ತೇನೆ ಎಂದು ಹೊರಟಿದ್ದಾನೆ. ಹೋಗುವಾಗ ಎಳನೀರಿನ ಅಂಗಡಿಯಲ್ಲಿ ಇರಿಸಿದ್ದ ಬ್ಯಾಗನ್ನು ತೆಗೆದುಕೊಂಡು ಹೋಗಿದ್ದಾನೆ. ಸಾಕಷ್ಟು ಹೊತ್ತಾದರೂ ವ್ಯಕ್ತಿ ಬಾರದೇ ಇದ್ದಾಗ ಜವರಮ್ಮ ಎಳನೀರಿನ ಅಂಗಡಿಗೆ ಬಂದಿದ್ದಾರೆ. ಆಗ ಮೋಸ ಹೋಗಿರುವುದು ಗೊತ್ತಾಗಿದೆ.