ಮೈಸೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ಅವರಿಗೆ ಹೈದರಾಬಾದ್ನಲ್ಲಿ ಶನಿವಾರ ಲಘು ಹೃದಯಾಘಾತವಾಗಿದೆ.
ತೆಲಂಗಾಣದಲ್ಲಿ ಇವರ ಸ್ನೇಹಿತ ಎಗ್ಗೆ ಮಲ್ಲೇಶಂ ಅವರು ತೆಲಂಗಾಣದ ವಿಧಾನಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಅವರಿಗೆ ಅಭಿನಂದನಾ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಭಾಗವಹಿಸಲು ವಿಶ್ವನಾಥ್ ಹೈದರಾಬಾದಿಗೆ ತೆರಳಿದ್ದರು. ಅಲ್ಲಿ ಶುಕ್ರವಾರ ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ನಂತರ, ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರ ಪುತ್ರ ಅಮಿತ್ ದೇವರಹಟ್ಟಿ, ‘ಸದ್ಯ ವಿಶ್ವನಾಥ್ ಅವರು ಆರೋಗ್ಯವಾಗಿದ್ದಾರೆ. ಬೆಂಗಳೂರಿಗೆ ಶನಿವಾರ ರಾತ್ರಿ ತಲುಪಲಿದ್ದು, ಮತ್ತೊಂದು ಸುತ್ತಿನ ಹೃದಯದ ಪರೀಕ್ಷೆಗಾಗಿ ಜಯದೇವ ಆಸ್ಪತ್ರೆಯಲ್ಲಿ ದಾಖಲಾಗುವರು’ ಎಂದು ತಿಳಿಸಿದ್ದಾರೆ.