ತಿ.ನರಸೀಪುರ: ಪಟ್ಟಣದ ರೇಷ್ಮೆ ಕೈಗಾರಿಕಾ ನಿಗಮ (ಕೆಎಸ್ಐಸಿ) ದಲ್ಲಿ ಅಕ್ರಮ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ದಸಂಸ) ಮುಖಂಡರು ಗುರುವಾರ ಕೆಎಸ್ಐಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ‘ಮೀಸಲಾತಿ ಅನ್ವಯ ಆದ್ಯತೆ ನೀಡದೆ ರಾತ್ರೋರಾತ್ರಿ ಹೊರಗಿನವರನ್ನು ಪಟ್ಟಣದ ಕೆಎಸ್ಐಸಿ ಘಟಕದ ವಿವಿಧ ಹುದ್ದೆಗಳಿಗೆ ಏಜೆನ್ಸಿ ಮೂಲಕ ಅಕ್ರಮ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.
‘ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಸ್ಥಳೀಯರಿಗೆ ವಂಚಿಸಿ ಹೊರಗಿನವರಿಗೆ ಉದ್ಯೋಗ ನೀಡಲಾಗುತ್ತಿದೆ. ಸ್ಥಳೀಯರು ಉದ್ಯೋಗ ಕೇಳಿದರೆ ಹುದ್ದೆ ಖಾಲಿ ಇಲ್ಲ ಎಂಬ ಸಬೂಬು ಹೇಳಿ, ರಾತ್ರೋರಾತ್ರಿ ನೌಕರರನ್ನು ನೇಮಕ ಮಾಡುವುದರ ಹಿಂದಿನ ಉದ್ದೇಶ ಏನು?, ನೇಮಕಾತಿಯಲ್ಲಿ ಭ್ರಷ್ಟಾಚಾರದ ಶಂಕೆ ಇದೆ’ ಎಂದು ದೂರಿದರು.
‘ಈ ಸಂಬಂಧ ಉನ್ನತಮಟ್ಟದ ತನಿಖೆ ನಡೆಸಿ ಅಕ್ರಮ ನೇಮಕ ರದ್ದುಪಡಿಸಿ, ಪಾರದರ್ಶಕ ನೇಮಕಾತಿಗೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಬಳಿಕ ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಅವರನ್ನು ಭೇಟಿ ಮಾಡಿದ ಮುಖಂಡರು ಮನವಿ ಪತ್ರ ನೀಡಿ, ಅಕ್ರಮ ನೇಮಕಾತಿ ಬಗ್ಗೆ ತನಿಖೆ ನಡೆಸುವಂತೆ ಕೋರಿದರು.