ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ, ಶರನ್ನವರಾತ್ರಿಯ ಪೂಜಾ ಕಾರ್ಯಕ್ರಮಗಳ ಮುಹೂರ್ತವನ್ನು ಮೈಸೂರು ಅರಮನೆ, ಒಂಟಿಕೊಪ್ಪಲು ಮತ್ತು ಮೇಲುಕೋಟೆ ಪಂಚಾಂಗಗಳನ್ನು ಆಧರಿಸಿ ನಿಗದಿಪಡಿಸಲಾಗಿದೆ.
ಅ.15ರಂದು ಶರನ್ನವರಾತ್ರಿ ಪ್ರಾರಂಭವಾಗಲಿದೆ. ಬೆಳಿಗ್ಗೆ 10.15ರಿಂದ 10.36ರವರೆಗೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಪೂಜೆಯೊಂದಿಗೆ ದಸರೆಗೆ ಚಾಲನೆ ನೀಡಲಾಗುವುದು.
ಅ.24ರಂದು ವಿಜಯದಶಮಿ ಅಂಗವಾಗಿ ಮಧ್ಯಾಹ್ನ 1.46ರಿಂದ 2.08ರೊಳಗೆ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮುಖ್ಯಮಂತ್ರಿ ನಂದಿ ಧ್ವಜ ಪೂಜೆ ನೆರವೇರಿಸುವರು. ಅಂಬಾವಿಲಾಸ ಅರಮನೆಯ ಒಳಾವರಣದಲ್ಲಿ ಸಂಜೆ 4.40ರಿಂದ 5ರವರೆಗೆ ಮುಖ್ಯಮಂತ್ರಿ ಮತ್ತು ಗಣ್ಯರು ಪುಷ್ಪಾರ್ಚನೆ ಮಾಡುವರು. ನಂತರ, ‘ಜಂಬೂಸವಾರಿ’ ಪ್ರಾರಂಭಗೊಳ್ಳಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕಳೆದ ವರ್ಷ ಸಂಜೆ 5.07ರಿಂದ 5.18ರೊಳಗೆ ಮೆರವಣಿಗೆಯನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಸಂಜೆ 5.37ಕ್ಕೆ ಶುರುವಾದ ಜಂಬೂಸವಾರಿ ರಾಜಪಥವನ್ನು ಪ್ರವೇಶಿಸಿ ಮುಂದೆ ಸಾಗುವ ಹೊತ್ತಿಗೆ ಕತ್ತಲು ಆವರಿಸಿತ್ತು. ಮೆರವಣಿಗೆಯು ಝಗಮಗಿಸುವ ವಿದ್ಯುತ್ ದೀಪಾಲಂಕಾರದ ಬೆಳಕಿನಲ್ಲಿ ಬನ್ನಿಮಂಟಪ ತಲುಪಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.