ಮೈಸೂರು: ‘ನಮ್ಮ ನಡುವೆ ಕೆಲವು ಸಾಹಿತಿಗಳು ನಡೆ– ನುಡಿಯಲ್ಲಿ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಭಾಷಣಗಳಲ್ಲಿ ಮಾತ್ರ ಆದರ್ಶ ತೋರಿಸುತ್ತಿದ್ದಾರೆ’ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಇಲ್ಲಿ ಮಂಗಳವಾರ ವಿಷಾದಿಸಿದರು.
ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡಿದ್ದ ರಂಗ ಹಾಗೂ ನೃತ್ಯ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಕುವೆಂಪು ಅವರ ನೇರಶಿಷ್ಯ ದೇಜಗೌ ಇದಕ್ಕೆ ಒಳ್ಳೆಯ ಉದಾಹರಣೆ. ತಮ್ಮ ಪುತ್ರ ಪ್ರೊ.ಜೆ.ಶಶಿಧರ ಪ್ರಸಾದ್ ಅವರು ಮೈಸೂರು ವಿ.ವಿ ಕುಲಪತಿಯಾಗಿದ್ದಾಗ ಭ್ರಷ್ಟಾಚಾರ ಆರೋಪ ಎದುರಿಸಿದಾಗ ವ್ಯಘ್ರರಾಗಿದ್ದರು. ತನಿಖೆ ನಡೆದು ಆರೋಪ ಸಾಬೀತಾದಾಗ ಉಪವಾಸ ಸತ್ಯಾಗ್ರಹ ನಡೆಸಿದ್ದರು. ನನ್ನ ಮಗ ತಪ್ಪು ಮಾಡಿದ್ದರೆ ನೇಣಿಗೆ ಹಾಕಿ ಎಂದು ಅವರು ಹೇಳಿದ್ದರೆ ಅವರು ದೊಡ್ಡ ವ್ಯಕ್ತಿಯಾಗುತ್ತಿದ್ದರು’ ಎಂದರು.
ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರು ವಯಸ್ಕರ ಶಿಕ್ಷಣದ ಹಣ ದುರ್ಬಳಕೆ ಮಾಡಿಕೊಂಡಿದ್ದರು. ಆದರೆ, ಈಗ ಹಂಪನಾ ದಂಪತಿ ಕುವೆಂಪು ಟ್ರಸ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವೆ ಹಾಗೂ ವಿಚಾರವಾದಿ ಬಿ.ಟಿ.ಲಲಿತಾ ನಾಯಕ್ ಅವರ ಪುತ್ರ ಕುಡಿದ ಅಮಲಿನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮದ್ಯ ಸುರಿದಾಗ, ‘ನನ್ನ ಮಗ ಹೀಗೆ ನಡೆದುಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಸುಳ್ಳು ವಾದಿಸಿದ್ದರು ಎಂದು ಹೇಳಿದರು.
‘ಕುವೆಂಪು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಂಬೇಡ್ಕರ್, ಗಾಂಧಿ, ಲೋಹಿಯಾ ಅವರಂತಹ ಮಹನೀಯರ ಜೀವನ ಕುರಿತು ನಾವು ಶ್ಲಾಘನೆಯ ಮಾತುಗಳನ್ನಾಡುತ್ತೇವೆ. ಆದರೆ, ಆದರ್ಶ ಪಾಲನೆಯ ಸಮಯ ಬಂದಾಗ ವಿಮುಖರಾಗುತ್ತೇವೆ’ ಎಂದು ಅಭಿಪ್ರಾಯಪಟ್ಟರು.