ಹುಣಸೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೋಂದಾಯಿಸಿದ್ದ 10 ಸಾವಿರ ಕೃಷಿಕರಿಗೆ ಕೇಂದ್ರ ಸರ್ಕಾರದ ಹಲವು ಕಂತು ಹಣ ಬ್ಯಾಂಕ್ ಖಾತೆಗೆ ಜಮಾ ಆಗದ ಬಗ್ಗೆ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.
ತಾಲ್ಲೂಕಿನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 35 ರಿಂದ 40 ಸಾವಿರ ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದು, ಹಲವು ಕಂತುಗಳ ಹಣ ಪಡೆದಿದ್ದರು. ಇತ್ತೀಚೆಗೆ 12 ಮತ್ತು 13ನೇ ಕಂತಿನ ಹಣ ₹ 2 ಸಾವಿರ, 10,700 ರೈತರಿಗೆ ಸಂದಾಯವಾಗಿಲ್ಲ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶ್ ತಿಳಿಸಿದರು.
ಅಭಿಯಾನ: ತಾಲ್ಲೂಕಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಆಗದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಅಭಿಯಾನ ಆರಂಭಿಸಿ ಫಲಾನುಭವಿಗಳ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸುವಲ್ಲಿ ನಿರತರಾಗಿದ್ದಾರೆ. ತಾಲ್ಲೂಕಿನ ಮರೂರು, ಉದ್ದೂರು, ಆಸ್ಪತ್ರೆ ಕಾವಲ್, ಬನ್ನಿಕುಪ್ಪೆ, ಹುಸೇನ್ ಪುರ, ಆಯರಹಳ್ಳಿ, ಚಿಲ್ಕುಂದ ಚೆನ್ನಸೋಗೆ ಗ್ರಾಮಗಳಲ್ಲಿ ಈಗಾಗಲೇ ಅಭಿಯಾನ ನಡೆದಿದೆ.
ಗ್ರಾಮಗಳಿಗೆ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಹಾಲಿನ ಡೇರಿ, ಸೊಸೈಟಿಗಳಲ್ಲಿ ಬೆಳಿಗ್ಗೆ 6 ರಿಂದ 8 ಮತ್ತು ಸಂಜೆ 7 ರಿಂದ 8 ಗಂಟೆವರಗೆ ಆಧಾರ್ ಲಿಂಕ್ ಮಾಡುವ ಕೆಲಸ ನಡೆದಿದೆ. ಕೆಲವು ಫಲಾನುಭವಿಗಳ ಮೊಬೈಲ್ ಇಲ್ಲದೆ, ಬೇರೆಯವರ ಸಂಖ್ಯೆ ಬಳಸಿ, ನೋಂದಣಿ ಮಾಡಿಸಿದ್ದು, ಇವರ ಹೆಸರುಗಳನ್ನು ಬೈಯೋಮೆಟ್ರಿಕ್ ಮೂಲಕ ದಾಖಲಿಸುವ ಕೆಲಸ ನಡೆದಿದೆ ಎಂದರು.