ಮಳವಳ್ಳಿ: ‘ಪುರಸಭೆಯಲ್ಲಿ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿ ತಾರತಮ್ಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಜೆಡಿಎಸ್ನ ಐವರು, ಬಿಜೆಪಿಯ ಇಬ್ಬರು ಹಾಗೂ ಕೆಲ ಪಕ್ಷೇತರ ಸದಸ್ಯರು ಪುರಸಭೆ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಕಳೆದ ಹಲವು ತಿಂಗಳುಗಳಿಂದ ಆಡಳಿತಾಧಿಕಾರಿ ನೇತೃತ್ವದಲ್ಲಿ ನಾಲ್ಕು ಸಭೆಗಳನ್ನು ಮಾಡಿದ್ದು, ಅನುದಾನ ಹಂಚಿಕೆ ತಾರತಮ್ಯ, ಅರೆಕಾಲಿಕ ನೌಕರರ ಟೆಂಡರ್ ಮುಂದುವರಿಕೆ ಸೇರಿದಂತೆ ಅನೇಕ ನಿರ್ಣಯಗಳನ್ನು ನಮ್ಮ ಗಮನಕ್ಕೆ ತಾರದೇ ಕೈಗೊಂಡಿದ್ದಾರೆ. ನಾಲ್ಕು ತುರ್ತು ಸಭೆಗಳ ನಡವಳಿಯಲ್ಲಿ ಸದಸ್ಯರ ಹಾಜರಾತಿಯಲ್ಲಿ 19 ಹಾಜರಿ ಮತ್ತು 4 ಗೈರು ಎಂದು ತೋರಿಸಿದ್ದು, ಯಾವುದೇ ಸದಸ್ಯರು ಸಭೆಗೆ ಹಾಜರಾಗಿಲ್ಲ’ ಎಂದು ಪ್ರತಿಭಟನನಿರತ ಸದಸ್ಯರು ಆರೋಪಿಸಿದರು.
1ನೇ ವಾರ್ಡ್ ಬಿಜೆಪಿ ಸದಸ್ಯ ಎಂ.ಎನ್.ಕೃಷ್ಣ ಮಾತನಾಡಿ, ‘ನಮಗೆ ಅನುದಾನ ಹಂಚಿಕೆಯಲ್ಲಿ ಸಾಕಷ್ಟು ಅನ್ಯಾಯವಾಗುತ್ತಿದೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಡಿದ್ದ ಕಡತ ಕಾಣೆಯಾಗಿದೆ ಎಂದು ಅಧಿಕಾರಿಗಳು ನಿರ್ಲಕ್ಷದ ಉತ್ತರ ನೀಡುತ್ತಾರೆ. ಚುನಾಯಿತ ಸದಸ್ಯರಾದ ನಮಗೆ ಮುಖ್ಯಾಧಿಕಾರಿಗಳು ಗೌರವ ನೀಡುವುದಿಲ್ಲ’ ಎಂದು ಆರೋಪಿಸಿದರು.
‘ಅಧ್ಯಕ್ಷರು, ಉಪಾಧ್ಯಕ್ಷರು ಇಲ್ಲದ ಸಂದರ್ಭದಲ್ಲಿ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಆರ್ಥಿಕ ವರ್ಷ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಕೆಲ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ಸದಸ್ಯರನ್ನು ಸಭೆಗೆ ಕರೆದಿಲ್ಲ. ನಡವಳಿಯನ್ನು ನಕಲು ಸಂದರ್ಭದಲ್ಲಿ ಕೈತಪ್ಪಿನಿಂದ ಸದಸ್ಯರ ಹಾಜರು ಮತ್ತು ಗೈರು ಹಾಜರಿ ಎಂದು ಬಂದಿದೆ. ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಲಭ್ಯತೆ ಮೇರೆಗೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನಾ ಸ್ಪಷ್ಟಪಡಿಸಿದರು.