ಯಳಂದೂರು: ತಾಲ್ಲೂಕಿನ ಮಾಂಬಳ್ಳಿ, ಅಗರ ಗ್ರಾಮಗಳ ರಸ್ತೆಗಳಲ್ಲಿ ಪ್ರತಿ ದಿನ ಟ್ರಾಪಿಕ್ ಜಾಮ್ ಸಮಸ್ಯೆಯಾಗಿ ಕಾಡಿದೆ. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಹಳೆಯ ಕಿರಿದಾದ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ದಿನನಿತ್ಯ ಜನ ಮತ್ತು ಜಾನುವಾರು ಸಾಕಣೆದಾರರು ರಸ್ತೆ ದಾಟಲು ಕಿರಿಕಿರಿ ಅನುಭವಿಸುವಂತೆ ಆಗಿದೆ.
ಗ್ರಾಮದ ನಡುವೆ ಕಿರಿದಾದ ರಸ್ತೆ ಹಾದು ಹೋಗಿದೆ. ಬೃಹತ್ ವಾಹನಗಳು ಮತ್ತು ಬಸ್ ಈ ಮಾರ್ಗದಲ್ಲಿ ಸಂಚರಿಸುತ್ತವೆ. ಜೊತೆಗೆ ದ್ವಿಚಕ್ರ ವಾಹನಗಳು ಓಡಾಡುತ್ತವೆ. ಇದರಿಂದ ರಸ್ತೆ ಮಾರ್ಗದಲ್ಲಿ ಅಳವಡಿಸಿರುವ ಪೈಪ್ ಒಡೆದು ನೀರು ಹರಿಯುವ ಸ್ಥಿತಿಯೂ ನಿರ್ಮಾಣವಾಗುತ್ತದೆ. ಹೋಟೆಲ್, ಅಂಗಡಿ ಮುಂಗಟ್ಟುಗಳು ಇದ್ದು, ವಾಹನಗಳ ಅಡ್ಡಾದಿಡ್ಡಿ ಚಾಲನೆಯಿಂದ ದಟ್ಟಣೆ ಹೆಚ್ಚಾಗಿ, ಸವಾರರು ಬವಣೆ ಪಡುವಂತಾಗಿದೆ.
‘ಗ್ರಾಮದ ಹೊರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ (209) ಕಾಮಗಾರಿ ನಡೆಯುತ್ತಿದೆ. ರಸ್ತೆ ನಿರ್ಮಾಣಕ್ಕೆ ಇನ್ನೂ ಸಮಯ ಬೇಕಿದೆ. ಕಿರಿದಾದ ಹಳೆಯ ರಸ್ತೆಯನ್ನು ಅಗಲೀಕರಣ ಮಾಡಿಲ್ಲ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಿದೆ. ಹಾಗಾಗಿ, ಈ ಭಾಗದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ವಾಹನಗಳ ವೇಗವನ್ನು ನಿಯಂತ್ರಿಸಬೇಕು’ ಎನ್ನುತ್ತಾರೆ ಗ್ರಾಮದ ಬಸಮ್ಮ,
ಬೈಪಾಸ್ ರಸ್ತೆ ಹಾದು ಹೋಗಿರುವ ಗ್ರಾಮಗಳ ಬದಿ ಹಳೆ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಗ್ರಾಮದ ಪ್ರವೇಶ ದ್ವಾರದಲ್ಲಿ ಹಂಪ್ಸ್ ಹಾಕಬೇಕು. ಪಾದಚಾರಿಗಳ ಸಂಚಾರಕ್ಕೆ ಮೊದಲ ಆದ್ಯತೆ ನೀಡಬೇಕು. ಕೆಲವೊಮ್ಮೆ ರಾತ್ರಿ ಸಮಯದಲ್ಲಿ ಅತಿಯಾದ ದಟ್ಟಣೆಯಿಂದ ಅಪಘಾತಗಳು ಸಂಭವಿಸುತ್ತವೆ. ಹಾಗಾಗಿ, ಈ ಭಾಗದಲ್ಲಿ ವಾಹನಗಳ ವೇಗ ನಿಯಂತ್ರಣ ಮಾಡಲು ಪೊಲೀಸರನ್ನು ನಿಯೋಜಿಸಬೇಕು’ ಎಂದು ಅಗರ ಗ್ರಾಮದ ನಾಗರಾಜು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.