ಮೈಸೂರು: ‘ಹೆಣ್ಣಾಗಿದ್ದರೆ ಸಾಕಾಗುವುದಿಲ್ಲ. ತಾಯಿ ಹೃದಯ ಇರಬೇಕು’ ಎಂದು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಇಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದರು.
‘ಈಗಾಗಲೇ ಮೈಸೂರಿಗೆ ಇಬ್ಬರು ಮಹಾರಾಣಿಯರು ಇದ್ದಾರೆ. ಈಗ ಇವರೂ ಮಹಾರಾಣಿಯಾಗುವುದು ಬೇಡ. ನಮಗೆ ಮಾತೃಹೃದಯ ಇರುವವರು ಬೇಕು’ ಎಂದು ಚಾಟಿ ಬೀಸಿದರು.
‘ನಾನು ಕಾಂಗ್ರೆಸ್ ಪಕ್ಷದವನು ಎಂಬ ಕಾರಣಕ್ಕೋ ಏನೋ ನನ್ನ ಪತ್ರಗಳಿಗೆ ಸ್ಪಂದಿಸುತ್ತಿಲ್ಲ. ಶಾಸಕ ಎಂಬ ಕನಿಷ್ಠ ಸೌಜನ್ಯವನ್ನೂ ಅವರು ತೋರುತ್ತಿಲ್ಲ. ಸ್ಪರ್ಧೆಗೆ ಬಿದ್ದವರಂತೆ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದಾರೆ. ಕಡತಕ್ಕೆ ಸಹಿ ಹಾಕಲು ವರ್ಗಾವಣೆ ಪ್ರಕರಣ ಕೋರ್ಟ್ನಲ್ಲಿದೆ ಎಂದು ನೆಪ ಹೇಳುತ್ತಿದ್ದಾರೆ. ನಾನು ರಾಜೀನಾಮೆ ನೀಡಲು ಸಿದ್ಧ. ಬಿಜೆಪಿಯವರೇ ಶಾಸಕರಾಗಿ ಆಯ್ಕೆಯಾಗಲಿ. ಕ್ಷೇತ್ರದ ಅಭಿವೃದ್ಧಿಯಾದರೆ ಸಾಕು’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪಸಿಂಹ, ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಇದ್ದ ಸಮಸ್ಯೆಗಳೇ ಹುಣಸೂರಿನಲ್ಲಿವೆ. ಜಿಲ್ಲಾಧಿಕಾರಿ ಎಲ್ಲವನ್ನೂ ಒಮ್ಮೆಗೆ ಬಗೆಹರಿಸಲು ಸಾಧ್ಯವಿಲ್ಲ’ ಎಂದು ರೋಹಿಣಿ ಸಿಂಧೂರಿ ಅವರನ್ನು ಸಮರ್ಥಿಸಿಕೊಂಡರು.