ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

MLC Election |ಮೈಸೂರು: ಮರಿತಿಬ್ಬೇಗೌಡ, ವಿವೇಕಾನಂದ ಭವಿಷ್ಯ ನಿರ್ಧಾರ

4 ಜಿಲ್ಲೆಗಳ 44 ಮತಗಟ್ಟೆಗಳಲ್ಲಿ ಮತದಾನ ಇಂದು; ಜೂನ್‌ 6ರಂದು ಮತ ಎಣಿಕೆ
Published 2 ಜೂನ್ 2024, 13:21 IST
Last Updated 2 ಜೂನ್ 2024, 13:21 IST
ಅಕ್ಷರ ಗಾತ್ರ

ಮೈಸೂರು: ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡಿರುವ ‘ವಿಧಾನಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ’ದ ದ್ವೈವಾರ್ಷಿಕ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.

ಸತತ 5ನೇ ಬಾರಿಗೆ ಆಯ್ಕೆ ಬಯಸಿ ಕಾಂಗ್ರೆಸ್‌ನಿಂದ ಕಣದಲ್ಲಿರುವ ಮರಿತಿಬ್ಬೇಗೌಡ ಮತ್ತು ಜೆಡಿಎಸ್‌–ಬಿಜೆಪಿ ಬೆಂಬಲದೊಂದಿಗೆ ಇದೇ ಮೊದಲಿಗೆ ಸ್ಪರ್ಧಿಸಿರುವ ಕೆ. ವಿವೇಕಾನಂದ ಸೇರಿದಂತೆ 11 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಬರೆಯಲು ಮತದಾರರು ಸಜ್ಜಾಗಿದ್ದಾರೆ. ಮತದಾನಕ್ಕಾಗಿ ಆಯಾ ಜಿಲ್ಲಾಡಳಿತಗಳಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಸೋಮವಾರ (ಜೂನ್‌ 3) ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಪ್ರೌಢಶಾಲೆಗಳ ಶಿಕ್ಷಕರು, ಪಿಯು ಹಾಗೂ ಪದವಿ ಕಾಲೇಜುಗಳ ಉಪನ್ಯಾಸಕರು, ಪ್ರಾಧ್ಯಾಪಕರು, ವಿಶ್ವವಿದ್ಯಾಲಯಗಳ ಬೋಧಕರು ಮತದಾರರಾಗಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 44 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 11,998 ಪುರುಷರು, 9,550 ಮಹಿಳೆಯರು, ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 21,549 (ಮೈಸೂರು–10,439, ಚಾಮರಾಜನಗರ–2,181, ಹಾಸನ– 3,526) ಮತದಾರರು ಇದ್ದಾರೆ.

ಪ್ರಾಶಸ್ತ್ಯದ ಮತದಾನ: ಈ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತದಾನ ಪ್ರಕ್ರಿಯೆ ನಡೆಯಲಿದೆ. ಮತಪತ್ರದಲ್ಲಿ ಹಕ್ಕು ಚಲಾಯಿಸಬೇಕಾಗುತ್ತದೆ.  ನೋಟಾ ಇರುವುದಿಲ್ಲ. ಮತದಾನ ಮಾಡಿದವರ ಬಲಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತದೆ.

ಪ್ರಮುಖ ಪಕ್ಷಗಳ ಅಭ್ಯರ್ಥಿಗಳೊಂದಿಗೆ ನಾಗೇಂದ್ರ ಬಾಬು (ಕೆಜೆಪಿ), ಮಾಜಿ ಶಾಸಕ ವಾಟಾಳ್ ನಾಗರಾಜ್‌ (ಕನ್ನಡ ಚಳವಳಿ ವಾಟಾಳ್ ಪಕ್ಷ), ಅನಿಲ್‌ ಕುಮಾರ್, ಅಂಬರೀಷ್, ನಿವೃತ್ತ ಡಿಡಿಪಿಯು ನಾಗಮಲ್ಲೇಶ್, ನಿಂಗರಾಜು ಎಸ್, ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ, ಬಿಎಸ್ಪಿ ಬೆಂಬಲಿತ ಅಭ್ಯರ್ಥಿ ಆರ್. ಮಹೇಶ್ ಹಾಗೂ ರಾಜು ಕೆ. (ಎಲ್ಲರೂ ಪಕ್ಷೇತರರು) ಕೂಡ ಸ್ಪರ್ಧಿಸಿದ್ದು, ಎಷ್ಟು ಮತಗಳನ್ನು ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಅಭ್ಯರ್ಥಿಗಳು, ಅವರ ಬೆಂಬಲಿಗರು ಹಾಗೂ ರಾಜಕೀಯ ಪಕ್ಷದವರು ಮತದಾರರ ಮನವೊಲಿಸಿಕೊಳ್ಳಲು ‘ಕೊನೆ ಕ್ಷಣದ ಕಸರತ್ತು’ಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ‘ಪ್ರಥಮ ಪ್ರಾಶಸ್ತ್ಯ’ದ ಮತಕ್ಕಾಗಿ ಎಲ್ಲರಲ್ಲೂ ಪೈಪೋಟಿ ಕಂಡುಬಂದಿದೆ. ‘ಪ್ರಬುದ್ಧ’ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಯಾರು ಹೊಸ ಪ್ರತಿನಿಧಿಯಾಗಿ ಆಯ್ಕೆಯಾಗುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ವಾಚ್, ಉಡುಗೊರೆ, ಹಣ ಹಂಚಿಕೆ, ಪಾರ್ಟಿ ಆಯೋಜನೆ ಮೊದಲಾದವುಗಳು ಕೂಡ ನಡೆದಿವೆ ಎನ್ನುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಮಾಜಕ್ಕೆ ಪಾಠ ಮಾಡುವವರ ಒಲವು ಯಾರ ಕಡೆಗಿದೆ ಎನ್ನುವುದು ಮತಪತ್ರಗಳಲ್ಲಿ ಭದ್ರವಾಗಲಿದೆ.

ಮತ ಎಣಿಕೆ ಕಾರ್ಯ ಜೂನ್‌ 6ರಂದು ಇಲ್ಲಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಬೆಳಿಗ್ಗೆ 8ಕ್ಕೆ ಆರಂಭಗೊಳ್ಳಲಿದೆ.

ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
ಕೆ.ಸಿ. ಪುಟ್ಟಸಿದ್ದಶೆಟ್ಟಿ
ಕೆ.ಸಿ. ಪುಟ್ಟಸಿದ್ದಶೆಟ್ಟಿ
ಮರಿತಿಬ್ಬೇಗೌಡ
ಮರಿತಿಬ್ಬೇಗೌಡ

ಹಲವರಿಗೆ ಪ್ರತಿಷ್ಠೆ

ಕಾಂಗ್ರೆಸ್‌ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ ಮೊದಲಾದವರು ಸೇರಿದಂತೆ ಶಾಸಕರು ಮಾಜಿ ಶಾಸಕರು ಹಾಗೂ ಮುಖಂಡರು ಪ್ರಚಾರ ಮಾಡಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಜೆಡಿಎಸ್ ಪ್ರಮುಖರ ಸಮಿತಿ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾಜಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಾ.ರಾ. ಮಹೇಶ್ ಮೊದಲಾದವರು ಪ್ರಚಾರ ಮಾಡಿದ್ದಾರೆ. ಈ ಎಲ್ಲ ನಾಯಕರಿಗೂ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ನೇರ ಹಾಗೂ ತೀವ್ರ ಪೈಪೋಟಿಯಿಂದ ಕೂಡಿರುವ ಈ ಅಖಾಡದಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವುದು ಸೋಮವಾರ ನಿರ್ಧಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT