ಮೈಸೂರು: ‘ನೇತಾಜಿ ಸುಭಾಷ್ ಚಂದ್ರಬೋಸ್ ಅಪ್ರತಿಮ ದೇಶ ಭಕ್ತ’ ಎಂದು ವಿದ್ವಾಂಸ ಪ್ರೊ.ಕೆ. ಅನಂತರಾಮು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮತ್ತು ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ನಟರಾಜ ಪ್ರತಿಷ್ಠಾನ ಸಂಸ್ಥೆಯ ಸಭಾಂಗಣದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಜನ್ಮದಿನಾಚರಣೆ ಪ್ರಯುಕ್ತ ಮಂಗಳವಾರ ನಡೆದ ವಿಶೇಷ ಉಪನ್ಯಾಸ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ರಾಷ್ಟ್ರಭಕ್ತಿಯು ಅತ್ಯಂತ ಪ್ರಮುಖವಾದ ಮೌಲ್ಯವಾಗಿದ್ದು, ಇಂದಿನ ಯುವ ಸಮುದಾಯ ಅದನ್ನು ರೂಢಿಸಿಕೊಳ್ಳಬೇಕು. ಸ್ವಾಭಿಮಾನ, ಸಮಾಜಸೇವೆ, ಧೈರ್ಯ, ಅಚಲ ಆತ್ಮವಿಶ್ವಾಸ, ಅಪಾರವಾದ ದೇಶಪ್ರೇಮದಂತಹ ಆದರ್ಶ ವ್ಯಕ್ತಿತ್ವವನ್ನು ಹೊಂದಿದ್ದ ನೇತಾಜಿ ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿದ್ದಾರೆ’ ಎಂದರು.
ಕೆಎಸ್ಒಯು ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ ಮಾತನಾಡಿ, ‘ಭಾರತದ ಸ್ವಾತಂತ್ರ್ಯ ಸಮರಕ್ಕೆ ನೇತಾಜಿ ಕೊಡುಗೆ ಅಪಾರವಾಗಿದೆ. ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಕಟ್ಟಿ ಬ್ರಿಟಿಷರನ್ನು ಭಾರತದಿಂದ ತೊಲಗಿಸಬೇಕೆಂದು ಅವಿರತ ಹೋರಾಟವನ್ನು ಮಾಡಿದರು. ಭಾರತವು ಪೂರ್ಣ ಸ್ವರಾಜ್ಯವನ್ನು ಪಡೆಯಬೇಕು ಎನ್ನುವುದು ನೇತಾಜಿಯವರ ಕನಸಾಗಿತ್ತು’ ಎಂದು ನೆನೆದರು.