ಮೈಸೂರು: ರಾಮಕೃಷ್ಣ ಆಶ್ರಮ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳ ನಡುವಿನ ವಿವಾದ ಸೋಮವಾರ ಪೊಲೀಸ್ ಠಾಣೆಯ ಮೆಟ್ಟಿಲೇರಿತು.
ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬಸವ ಬಳಗಗಳ ಒಕ್ಕೂಟದ ಸದಸ್ಯರು ಇಲ್ಲಿನ ದೇವರಾಜ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.
ಪಾರಂಪರಿಕ ಕಟ್ಟಡದಲ್ಲಿದ್ದ ದಕ್ಷಿಣೇಶ್ವರ ಮೂರ್ತಿಯನ್ನು ಅನುಮತಿ ಇಲ್ಲದೇ ವಿರೂಪಗೊಳಿಸುವ ಮೂಲಕ ವೀರಶೈವ ಸಮಾಜದವರ ಭಾವನೆಗಳಿಗೆ ಧಕ್ಕೆ ತರಲಾಗಿದ್ದು, ರಾಮಕೃಷ್ಣ ಆಶ್ರಮದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ. ಈ ಕುರಿತ ದಾಖಲಾತಿಗಳನ್ನು ಸಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಪ್ರತಿಭಟನೆ ಮುಂದುವರಿಕೆ: ಎನ್ಟಿಎಂ ಐತಿಹಾಸಿಕ ಕನ್ನಡ ಶಾಲೆ ಉಳಿಸಿಕೊಂಡು, ಸ್ಮಾರಕ ನಿರ್ಮಿಸಿ ಎಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ಎನ್ಟಿಎಂ ಶಾಲೆಯ ಮುಂಭಾಗ ಮಹಾರಾಣಿ ಮಾದರಿ ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರೊಂದಿಗೆ ಸೇರಿ ಸೋಮವಾರ ಪ್ರತಿಭಟನೆ ನಡೆಸಿದರು.
ರಾಮಕೃಷ್ಣ ಆಶ್ರಮದ ಬಗ್ಗೆ ನಮಗೆ ಅಪಾರವಾದ ಅಭಿಮಾನವಿದೆ. ನಮ್ಮ ಹಿಂದೂ ಧರ್ಮ ಸಂಸ್ಕೃತಿ ಪರಂಪರೆಗಳನ್ನು ಉಳಿಸುವ ನಿಟ್ಟಿನಲ್ಲಿ ಆಶ್ರಮದ ಕೊಡುಗೆ ಅಪಾರ ಹಾಗೂ ಬಹಳಷ್ಟು ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಹಾಗೆಯೇ ಈ ಶಾಲೆಯನ್ನೂ ಉಳಿಸಿಕೊಂಡು ಸ್ಮಾರಕ ನಿರ್ಮಿಸಲಿ’ ಎಂದು ಸೇನಾಪಡೆಯ ಜಿಲ್ಲಾ ಘಟಕದ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಒತ್ತಾಯಿಸಿದರು.
ಹೋರಾಟಗಾರರಾದ ಪ.ಮಲ್ಲೇಶ್, ಸ.ರ.ಸುದರ್ಶನ್, ಪುರುಷೋತ್ತಮ್, ಇದ್ದರು.