ಮೈಸೂರು: ನಾಡಹಬ್ಬ ಮೈಸೂರು ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ (ವಿಜಯದಶಮಿ ಮೆರವಣಿಗೆ) ವೀಕ್ಷಿಸಲು ಕೆಲವರು ಸಯ್ಯಾಜಿರಾವ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಹಳೆಯ ಚೀಲ, ರಗ್ಗು, ಚಾಪೆ, ಬಟ್ಟೆ ಮೊದಲಾದವುಗಳನ್ನು ಹಾಸಿ ಅದರ ಮೇಲೆ ಕಲ್ಲನ್ನಿಟ್ಟು ಜಾಗ ಕಾಯ್ದಿರಿಸಿದ್ದಾರೆ.
ವಿಜಯದಶಮಿ ಮೆರವಣಿಗೆ ಮಂಗಳವಾರ ನಡೆಯಲಿದೆ. ಅದಕ್ಕಾಗಿ ಜನರು ರಸ್ತೆಬದಿಯಲ್ಲಿ ಕುಳಿತು ವೀಕ್ಷಿಸಲು ಜಾಗ ಮಾಡಿಕೊಂಡಿದ್ದಾರೆ. ಮೆರವಣಿಗೆಯು ಮಂಗಳವಾರ ಸಂಜೆ ಆರಂಭವಾಗಲಿದೆ. ಅಂದು ಬೆಳಿಗ್ಗೆಯಿಂದಲೇ ಜನರು ಬಂದು ಸೇರುತ್ತಾರೆ. ಅಂಬಾವಿಲಾಸ ಅರಮನೆ ಆವರಣದಿಂದ ಸಾಗುವ ಮೆರವಣಿಗೆಯು ಬನ್ನಿಮಂಟಪ ಮೈದಾನದ ಬಳಿ ಮುಕ್ತಾಯಗೊಳ್ಳಲಿದೆ. ಅಲಂಕೃತ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾದ ಚಾಮುಂಡೇಶ್ವರಿ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಹಾಗೂ ನಮಿಸಲು ಜನರು ಉತ್ಸುಕರಾಗಿದ್ದಾರೆ. ಮಾರ್ಗದುದ್ದಕ್ಕೂ ಬ್ಯಾರಿಕೇಡ್ ಹಾಕಿ ಹಾಗೂ ಜಾಲರಿಗಳನ್ನು ಕಟ್ಟಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಿಜಯದಶಮಿ ಮೆರವಣಿಗೆಯಂದು ನಗರದಲ್ಲಿ ಐದು ಲಕ್ಷ ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.