ತಲಕಾಡು: ಪಂಚಲಿಂಗ ಸಮೂಹದ ವೈದ್ಯನಾಥೇಶ್ವರ, ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯ ಕಚೇರಿಯ ಪಕ್ಕದಲ್ಲಿರುವ ಮರ ಸಂಪೂರ್ಣವಾಗಿ ಬೀಳುವ ಸ್ಥಿತಿಯಲ್ಲಿದ್ದು, ತೆರವಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಳೆ ಗಾಳಿಯ ಸಂದರ್ಭದಲ್ಲಿ ಅಪಾಯದ ಸಮಸ್ಯೆ ಹೆಚ್ಚಿದ್ದು, ಇದನ್ನು ತೆರವು ಮಾಡಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಅರಣ್ಯ ಇಲಾಖೆ ಕೈಕಟ್ಟಿ ಗಮನ ಹರಿಸಿಲ್ಲ. ಮರ ತೆರವುಗೊಳಿಸುವ ಬಗ್ಗೆ ಅನೇಕ ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ಮರದ ತಳದ ಬೇರುಗಳು ಬೆಂಕಿಗೆ ಆಹುತಿಯಾಗಿ ಮರ ಸಡಿಲವಾಗಿದೆ. ಜೋರಾಗಿ ಮಳೆ ಗಾಳಿ ಬೀಸಿದರೆ ಮರ ಸಂಪೂರ್ಣವಾಗಿ ನೆಲಕಚ್ಚಲಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು, ಸಾರ್ವಜನಿಕರ ಜೊತೆಗೆ ದೇವಾಲಯವು ಹಾನಿಗೊಳ್ಳುವ ಸಂಭವ ಹೆಚ್ಚಿದೆ.
ವೈದ್ಯನಾಥೇಶ್ವರ ದೇವಸ್ಥಾನ ಮುಂಭಾಗ ಇರುವ ಮರವನ್ನು ಇನ್ನೆರಡು ದಿನಗಳಲ್ಲಿ ತೆರವುಗೊಳಿಸಲು ತುರ್ತು ಕ್ರಮ ಕೈಗೊಳ್ಳಲಾಗುವುದು.
ನಾಗರಾಜು, ಅರಣ್ಯ ಅಧಿಕಾರಿ, ಮೀಸಲು ಅರಣ್ಯ ಪ್ರದೇಶ ತಲಕಾಡು
‘ನಮ್ಮ ಮನೆ ಮುಂಭಾಗದಲ್ಲಿರುವ ಮರವು ಬಹುತೇಕ ಹಾಳಾಗಿದ್ದು, ಮರ ತೆರವುಗೊಳಿಸಲು ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿದರು ಪ್ರಯೋಜನವಾಗಿಲ್ಲ. ಮುಂದೆ ಇದರಿಂದ ಪ್ರಾಣಾಪಾಯ ಖಂಡಿತ’ ಎಂದು ಹೇಳುತ್ತಾರೆ ಸ್ಥಳೀಯ ನಿವಾಸಿ ಕೀರ್ತಿ.
‘ಮರವು ವೀರಭದ್ರಸ್ವಾಮಿ ದೇವಾಲಯಕ್ಕೆ ಸಮೀಪವಿರುವುದರಿಂದ ಬಹುತೇಕ ಮರವು ಶಿಥಿಲಾವಸ್ಥೆಯಲ್ಲಿದೆ. ಯಾವ ಸಮಯದಲ್ಲಾದರೂ ಧರೆಗೆ ಉರುಳುವುದರಿಂದ ದೇವಸ್ಥಾನಕ್ಕೆ ಬಹಳಷ್ಟು ದೊಡ್ಡ ಹಾನಿಯಾಗಲಿದೆ’ ಎಂದು ವೀರಭದ್ರ ಸ್ವಾಮಿ ದೇವಾಲಯದ ಅರ್ಚಕ ರಾಜು ಹೊನ್ನಪ್ಪ ತಿಳಿಸಿದರು