ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಬೆಟ್ಟ ಅಲ್ಲಲ್ಲಿ ಕುಸಿದಿದೆ, ರೋಪ್ ವೇ ಬೇಡ: ಡಾ.ಎಸ್.ಎಲ್.ಭೈರಪ್ಪ ಸಲಹೆ

ಅಭಿನಂದನೆ ಸ್ವೀಕರಿಸಿ ಕಾದಂಬರಿಕಾರ ಭೈರಪ್ಪ ಸಲಹೆ
Last Updated 11 ಫೆಬ್ರುವರಿ 2023, 15:45 IST
ಅಕ್ಷರ ಗಾತ್ರ

ಮೈಸೂರು: ‘ಯಾತ್ರಾ ಸ್ಥಳವಾದ ಚಾಮುಂಡಿ ಬೆಟ್ಟ ಅಲ್ಲಲ್ಲಿ ಕುಸಿದಿದೆ. ಆದ್ದರಿಂದ, ಅಲ್ಲಿಗೆ ರೋಪ್ ವೇ ನಿರ್ಮಿಸುವುದು ಬೇಡ’ ಎಂದು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಸಲಹೆ ನೀಡಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌, ಎಚ್‌.ವಿ.ರಾಜೀವ್ ಸ್ನೇಹ ಬಳಗ, ಹೊಯ್ಸಳ ಕನ್ನಡ ಸಂಘ ಹಾಗೂ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ವಂದನೆ–ಅಭಿನಂದನೆ’ ಕಾರ್ಯಕ್ರಮದಲ್ಲಿ ‘ಪದ್ಮಭೂಷಣ’ಕ್ಕೆ ಭಾಜನವಾದ ಹಿನ್ನೆಲೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ನಾನು ಬಹಳ ಹಿಂದೆಯೇ, ಹಿಮಾಲಯಕ್ಕೆ ಹೋಗಿದ್ದಾಗ ಜೋಶಿಮಠವನ್ನು ನೋಡಿದ್ದೆ. ಆದರೀಗ ಅದು ಕುಸಿದಿದೆ. ವಾಸ್ತವವಾಗಿ ಅದು ಜೋಶಿಮಠವಲ್ಲ, ಅದು ಜ್ಯೋತಿರ್ಮಠ. ಐದು ವರ್ಷಗಳ ಹಿಂದೆ ಹೋಗಿದ್ದಾಗ, ಅಲ್ಲಿ ಗಮನಿಸಿದ್ದೇನೆಂದರೆ ಬಹುಮಹಡಿ ಕಟ್ಟಡ ಕಟ್ಟಿರುವುದು. ಯಾತ್ರಾ ಸ್ಥಳ ಪ್ರವಾಸಿ ತಾಣವಾದಾಗ ಯಾತ್ರೆಯ ಮಹತ್ವ ಹೋಗಿಬಿಡುತ್ತದೆ. ಪ್ರವಾಸಿ ಕೇಂದ್ರವಾದ್ದರಿಂದಲೇ ಅದು ಕುಸಿದಿದೆ’ ಎಂದರು.

‘ನಮ್ಮ ಚಾಮುಂಡಿಬೆಟ್ಟಕ್ಕೆ ರೂಪ್ ವೇ ಹಾಕುತ್ತೇವೆ ಎನ್ನುತ್ತಿದ್ದಾರೆ. ಬೆಟ್ಟವೇ ಕುಸಿದು ಹೋಗುತ್ತದೆ ಎಂದು ಹೇಳಿದರೂ ಕೇಳುವುದೇ ಇಲ್ಲ. ಯಾಕೆ? ಭ್ರಷ್ಟಾಚಾರವೇ ಇದಕ್ಕೆಲ್ಲ ಕಾರಣ’ ಎಂದು ಹೇಳಿದರು.

ಯಾವ ಮಟ್ಟಕ್ಕೆ ಬೇಕಾದರೂ‌:

‘ನಾನು ಓದಿದ್ದು ಸಾಹಿತ್ಯ ಅಲ್ಲ. ತತ್ವಶಾಸ್ತ್ರ ಓದಿ, ಅದರಲ್ಲಿ ಸಂಶೋಧನೆ ಮಾಡಿ, ಅದನ್ನೇ ಪಾಠ ಹೇಳುತ್ತಿದ್ದವನು ನಾನು. ನಂತರ, ಸಾಹಿತ್ಯ ‌ರಚನೆಗೆ ತಿರುಗಿದೆ. ಪ್ರಶಸ್ತಿಗಳು ಬಂದಾಗ ಸಹಜವಾಗಿಯೇ ಖುಷಿಯಾಗುತ್ತದೆ. ಆದರೆ, ಐದು ನೂರು ವರ್ಷಗಳ ನಂತರವೂ ನನ್ನ ಪುಸ್ತಕವನ್ನು ಜನರು ಓದಿದರೆ ಅದೇ ನಿಜವಾದ ಪ್ರಶಸ್ತಿ’ ಎಂದರು.

‘ಪ್ರಜಾಪ್ರಭುತ್ವದಲ್ಲಿ ಮತಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ‌ ಹೋಗುತ್ತಾರೆ’ ಎಂದು ವಿಶ್ಲೇಷಿಸಿದರು.

‘ಕಲಾವಿದ ಹಾಗೂ ಸಾಹಿತಿಗೆ ಆಲೋಚನೆಯೂ‌–ಕಲ್ಪನೆಯೂ‌ ಇರುತ್ತದೆ.‌ ಕಲ್ಪನೆಯ ಬರಹವು ಓದುಗರ ಅಃತಕರಣವನ್ನು ಮುಟ್ಟುತ್ತದೆ. ಆದರೆ, ಈಗ ಗೋವಿನ ಕಥೆಯಂತಹ ಕಥೆಗಳು ಪಠ್ಯಪುಸ್ತಕದಲ್ಲಿ ಉಳಿದಿಲ್ಲ. ಅವುಗಳನ್ನು ತೆಗೆದು ಹಾಕಲಾಗಿದೆ’ ಎಂದು ವಿಷಾದ ವ್ಯಕ್ತ‍ಪಡಿಸಿದರು.

ಪ್ರಶಸ್ತಿಗಳನ್ನು ಮೀರಿದ ವ್ಯಕ್ತಿತ್ವ:

ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಪದ್ಮ ‍ಪುರಸ್ಕಾರಕ್ಕೆ ಭಾಜನವಾಗಿ ಮೈಸೂರಿಗೆ ಗೌರವ ತಂದುಕೊಟ್ಟಿರುವವರನ್ನು ಅಭಿನಂದಿಸುವುದು ನಮ್ಮನ್ನು ಗೌರವಿಸಿಕೊಂಡಂತೆಯೇ. ಪ್ರಶಸ್ತಿಗಳನ್ನು ಮೀರಿದ ವ್ಯಕ್ತಿತ್ವ ಇವರದ್ದು’ ಎಂದು ನುಡಿದರು.

‘ಪದ್ಮಶ್ರೀ’ ಪುರಸ್ಕೃತ ಡಾ.ಖಾದರ್ ವಲ್ಲಿ ಅವರನ್ನು ಪರಿಚಯಿಸಿದ ಪ್ರಗತಿಪರ ಕೃಷಿಕ ಹೊನ್ನೂರು ಪ್ರಕಾಶ್, ‘ದೇಶದಾದ್ಯಂತ ಸಿರಿಧಾನ್ಯದ ಮಹತ್ವ ಸಾರುತ್ತಿರುವ ಖಾದರ್ ಅವರಿಗೆ ಭಾರತರತ್ನ ದೊರೆಯಲಿ’ ಎಂದು ಆಶಿಸಿದರು.

ಭೈರಪ್ಪ ಅವರನ್ನು ಸಾಹಿತಿ ಡಾ.ಪ್ರಧಾನ ಗುರುದತ್ತ, ‘ಪದ್ಮಶ್ರೀ’ ಪುರಸ್ಕೃತ ಡಾ.ಎಸ್.ಸುಬ್ಬರಾಮನ್‌ ಅವರನ್ನು ಇತಿಹಾಸ ತಜ್ಞ ಡಾ.ರೋಹಿತ್ ಈಶ್ವರ್ ಪರಿಚಯಿಸಿದರು.

‘ಸುಧರ್ಮ’ ಸಂಸ್ಕೃತ ಪತ್ರಿಕೆ ಸಂಸ್ಥಾಪಕ ಕೆ.ವಿ.ಸಂಪತ್‌ಕುಮಾರ್ (ಮರಣೋತ್ತರ) ಅವರಿಗೆ 2021ರಲ್ಲಿ ‘ಪದ್ಮಶ್ರೀ’ ದೊರೆತ ಹಿನ್ನೆಲೆಯಲ್ಲಿ ಪತ್ನಿ, ಈಗಿನ ಸಂಪಾದಕಿ ಜಯಲಕ್ಷ್ಮಿ ಅವರನ್ನು ಅಭಿನಂದಿಸಲಾಯಿತು. ಅವರನ್ನು ಇತಿಹಾಸ ಸಂಶೋಧಕ ಡಾ.ಎಚ್‌.ವಿ.ನಾಗರಾಜರಾವ್ ಪರಿಚಯಿಸಿದರು.

ಕಾರ್ಯಕ್ರಮದ ಸಂಚಾಲಕ, ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್ ಇದ್ದರು.

‘ಸಿರಿಧಾನ್ಯದಿಂದ ಆರೋಗ್ಯ’

ಡಾ.ಖಾದರ್ ಮಾತನಾಡಿ, ‘ಕಾರ್ಪೊರೇಟ್ ಕಂಪನಿಗಳ ಷಡ್ಯಂತ್ರದಿಂದಾಗಿ ಕೃತಕವಾದ ಪದಾರ್ಥಗಳನ್ನು ನಮ್ಮ ತಟ್ಟೆಗಳನ್ನು ತುಂಬುತ್ತಿರುವುದು ದೌರ್ಭಾಗ್ಯ’ ಎಂದರು.

‘ಮಧುಮೇಹವು ಕೆಟ್ಟ ಹಾಗೂ ಅವೈಜ್ಞಾನಿಕ ಆಹಾರದಿಂದ ಬರುತ್ತದೆ. ಅಂತಹ ಆಹಾರ ತಿನ್ನದಿದ್ದರೆ 30 ದಿನಗಳಲ್ಲಿ ರೋಗಗಳಿಂದ ಪಾರಾಗಬಹುದು. ಕ್ಯಾನ್ಸರ್ ಮೊದಲಾದ ರೋಗಗಳಿಂದಲೂ ದೂರವಿರಬಹುದು. ಆಹಾರ ಸರಿ ಇದ್ದರೆ ಔಷಧಿಯೇ ಬೇಕಾಗುವುದಿಲ್ಲ’ ಎಂದು ಪ್ರತಿಪಾದಿಸಿದರು.

‘ಸಿರಿಧಾನ್ಯ ತಿನ್ನುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಅದರಲ್ಲಿ ನಾರಿನ ಅಂಶ ಜಾಸ್ತಿ ಇರುತ್ತದೆ. ಯಾವುದೇ ರೋಗ ರಕ್ತದ ಅಸಮತೋಲನದಿಂದ ಉಂಟಾಗುತ್ತದೆ.‌ ಇದನ್ನು ಸಿರಿಧಾನ್ಯಗಳ ಮೂಲಕ ತಪ್ಪಿಸಬಹುದಾಗಿದೆ. ಎಲ್ಲರೂ ಸಿರಿಧಾನ್ಯ ಬಳಸಿದರೆ ಆಸ್ಪತ್ರೆಗಳು 15 ವರ್ಷಗಳಲ್ಲಿ ಬಂದ್‌ ಆಗುತ್ತವೆ’ ಎಂದರು.

ಸಂರಕ್ಷಿಸಿದ ಕಥೆ

ಎಸ್.ಸುಬ್ಬರಾಮನ್ ತಾವು ಮಾಡಿದ ಕೆಲಸವನ್ನು ಹಂಚಿಕೊಂಡರು.

‘ಅಜಂತಾ ಚಿತ್ರಗಳ ಬಗ್ಗೆ ಕೇಳಿರಬಹುದು, ನೋಡಿರಬಹುದು. ಅವು ಉತ್ಕೃಷ್ಟವಾದವು. ಅಜಂತಾ ಗುಹೆಗಳು 80 ಅಡಿ‌ ಉದ್ದ, ಅಗಲದ ವಿಸ್ತಾರವಾದ ಕಲಾಗ್ಯಾಲರಿ ರೀತಿ ಇವೆ. 30ರಲ್ಲಿ ಕಾಲಕ್ರಮೇಣ ನಾಲ್ಕು ಗುಹೆಗಳಲ್ಲಿ ಪ್ರಮುಖವಾದ ಚಿತ್ರಗಳಿವೆ. ದೇಶದ ಪುರಾತನ‌ ಚಿತ್ರಗಳ ಸಂರಕ್ಷಣೆಯಲ್ಲಿ ಮೊದಲಿಗೆ ಪ್ರಯತ್ನಿಸಿದವರು ಹೈದರಾಬಾದ್‌ನ ನಿಜಾಮರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT