ಮೈಸೂರು: ‘ಸಮಾಜದ ಒಳಿತಿಗಾಗಿ, ಯಶಸ್ಸಿಗಾಗಿ, ಅನುಭವದ ಸೇವೆಯನ್ನು ಮಾಡಲು ನಿವೃತ್ತಿಯ ಜೀವನ ಅಮೂಲ್ಯ ಕಾಲವಾಗಿದೆ’ ಎಂದು ರಾಜ್ಯ ಪಿಯು ಸಂಘಟನೆಗಳ ಒಕ್ಕೂಟ ಹಾಗೂ ಉಪನ್ಯಾಸಕರ ಹಿತರಕ್ಷಣಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕಾಡ್ನೂರು ಶಿವೇಗೌಡ ತಿಳಿಸಿದರು.
ನಗರದ ಚಾಮರಾಜಜೋಡಿ ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶಿಕ್ಷಕರಾದವರು ಸರ್ವ ದುರ್ಗುಣಗಳನ್ನು ತೊರೆದು, ಸುಜ್ಞಾನ, ಸದ್ಗುಣಗಳ ಮೂಲಕ, ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದು ಅಜ್ಞಾನದ ಅಂಧಕಾರದಿಂದ, ಜ್ಞಾನದ ಬೆಳಕು ತೋರುವ ಪ್ರಯತ್ನಕ್ಕೆ ನಾಂದಿ ಹಾಡಬೇಕು’ ಎಂದರು.
ನಿವೃತ್ತಿ ಹೊಂದಿದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ಸತೀಶ್ಕುಮಾರ್ ಅವರಿಗೆ ಇದೇ ಸಂದರ್ಭ ಬೀಳ್ಕೊಡುಗೆ ನೀಡಲಾಯಿತು. ‘ನನ್ನ ಅವಧಿಯಲ್ಲಿ ಸಂತೋಷದಿಂದ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡಿಕೊಂಡು ಬಂದಿರುವೆ. ಸಮಾಜದ ಸಹಕಾರದಿಂದ, ಒಡನಾಡಿಗಳಿಂದ ನಾನು ಇಂದು ಗೌರವ ರೀತಿಯಲ್ಲಿ ನಿವೃತ್ತಿ ಹೊಂದುತ್ತಿರುವುದಕ್ಕೆ ಸಂತೋಷವಿದೆ’ ಎಂದು ಹೇಳಿದರು