ಮೈಸೂರು: ‘ಶ್ರೀನಿವಾಸ್ ಪ್ರಸಾದ್ ಅವರು ಐದು ದಶಕದ ರಾಜಕಾರಣದಲ್ಲಿ ಕಪ್ಪುಚುಕ್ಕೆಯಿಲ್ಲದೆ ಬದುಕಿದ್ದರು. ಅವರ ಜೀವನ ಕಥೆ ಇಂದಿನ ರಾಜಕಾರಣಿಗಳಿಗೆ ಮಾದರಿ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದ ಸಾಹಿತ್ಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ತಳ ಸಮುದಾಯದಿಂದ ಬಂದ ಅವರು ಸ್ವಾಭಿಮಾನಿ ರಾಜಕಾರಣಿಯಾಗಿ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಅವರು ವ್ಯಕ್ತಿಯಾಗಿರದೆ ಶೋಷಿತರ ಶಕ್ತಿಯಾಗಿ ಬಿಂಬಿತವಾಗಿದ್ದರು. ಎಲ್ಲಾ ಸಮುದಾಯದವರ ಜೊತೆ ಅವರು ನಡೆದುಕೊಳ್ಳುತ್ತಿದ್ದ ರೀತಿ ನಮಗೆಲ್ಲಾ ಮಾದರಿ’ ಎಂದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ನೀಲಗಿರಿ ತಳವಾರ ಮಾತನಾಡಿ, ‘ಶ್ರೀನಿವಾಸ್ ಪ್ರಸಾದ್ ನಮ್ಮ ನಾಡು ಕಂಡ ಅಪರೂಪದ ವ್ಯಕ್ತಿ. ಅಂತಹ ಸಂವೇದನಾಶೀಲ ರಾಜಕಾರಣಿ ಇಂದಿನ ದಿನಗಳಲ್ಲಿ ಕಡಿಮೆ ಕಾಣಸಿಗುತ್ತಾರೆ. ಅವರು ಓಲೈಕೆಯ ರಾಜಕಾರಣದಿಂದ ದೂರ ಉಳಿದ ಸರಳತೆಯ ರಾಜಕಾರಣಿ’ ಎಂದು ಹೇಳಿದರು.
‘ಬೃಹತ್ ಗ್ರಂಥ ಹಾಗೂ ಉದ್ದದ ಭಾಷಣದಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಪ್ರಸಾದ್ ಅವರು ಎಡಿಟರ್ ಆಗಿದ್ದು ಅವರು ಹೇಳಿದ್ದನ್ನು ನಾನು ಬರೆಯುತ್ತಿದ್ದೆ. ಒಂದು ಮಾತು ಹೆಚ್ಚು ಒಂದು ಮಾತು ಕಡಿಮೆ ಅನ್ನುವ ರೀತಿ ನಮ್ಮಲ್ಲಿ ಪುಸ್ತಕಗಳನ್ನು ಬರೆಸಿದ್ದರು. ನಿಷ್ಠುರ ಮಾತುಗಳಿದ್ದರೂ ಅದರಲ್ಲಿ ಮಮತೆಯೂ ಇತ್ತು’ ಎಂದು ತಿಳಿಸಿದರು.