ಮೈಸೂರು: ‘ಅಂಡಾಶಯ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಹಿಳೆಗೆ 10 ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ. ಕೆ.ಆರ್.ಸುಹಾಸ್ ತಿಳಿಸಿದರು.
‘ಮೂರು ವಾರಗಳ ಕಾಲ ಹೊಟ್ಟೆ ನೋವಿನಿಂದ ಬಳಲುತ್ತಿದ್ದ40 ವರ್ಷದ ಮಹಿಳೆಗೆ ವೈದ್ಯಕೀಯ ತಪಾಸಣೆ ನಡೆಸಿದಾಗ ಹೊಟ್ಟೆಯಲ್ಲಿ ಅನೇಕ ಕ್ಯಾನ್ಸರ್ ಕೋಶಗಳು ಶೇಖರಣೆಗೊಂಡಿದ್ದವು. ದೊಡ್ಡ ಅಂಡಾಶಯ ಗೆಡ್ಡೆ ಇರುವುದು ಖಾತ್ರಿಯಾಯಿತು. ನಂತರ ಸೈಟೋರೆಡಕ್ಟೀವ್ ಶಸ್ತ್ರಚಿಕಿತ್ಸೆ ಮಾಡಿ, ನಂತರ ಹೈಪರ್ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕಿಮೋಥೆರಪಿ (ಎಚ್ಐಪಿಇಸಿ) ಮಾಡಲಾಯಿತು. ಇದರಿಂದ ರೋಗಿಯು ಸಂಪೂರ್ಣ ಗುಣಮುಖರಾಗಲು ಸಾಧ್ಯವಾಯಿತು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಅಂಡಾಶಯ ಕ್ಯಾನ್ಸರ್ ಲಕ್ಷಣಗಳು ತಡವಾಗಿ ಘೋಚರಿಸುತ್ತವೆ. ಕೆಲವರಿಗೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ, ತೂಕ ಕಡಿಮೆಯಾಗುತ್ತದೆ.ಮೂರನೇ ಹಂತದಲ್ಲಿರುವಾಗ ಬಹಳಷ್ಟು ರೋಗಿಗಳು ಬರುತ್ತಾರೆ. ಇಂಥ ಸಂದರ್ಭದಲ್ಲೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸಬಹುದು. ಮೈಸೂರು ಭಾಗದಲ್ಲಿ ಅರಿವು ಮೂಡಿಸಲು ಮುಂದಾಗಿದ್ದೇವೆ’ ಎಂದು ಹೇಳಿದರು.
‘ಇಂಥದ್ದೇ ಕಾರಣಕ್ಕೆ ಅಂಡಾಶಯ ಕ್ಯಾನ್ಸರ್ ಬರುತ್ತದೆ ಎಂದು ಹೇಳಲಾಗದು. ಶೇ 10 ಪ್ರಕರಣಗಳಲ್ಲಿ ಆನುವಂಶಿಕ ಕಾರಣದಿಂದ ಬರಬಹುದು. ಇದೇ ರೀತಿ ದೊಡ್ಡ ಕರುಳಿನ ಕ್ಯಾನ್ಸರ್ ಹಾಗೂ ಅಪೆಂಡಿಕ್ಸ್ ಕ್ಯಾನ್ಸರ್ಗಳಿಗೂ ಶಸ್ತ್ರಚಿಕಿತ್ಸೆ ಮೂಲಕ ಗುಣಪರಿಸಬಹುದು’ ಎಂದು ತಿಳಿಸಿದರು.
ಹೃದಯ ಶಸ್ತ್ರಚಿಕಿತ್ಸಕ ಡಾ.ಎಂ.ಎನ್.ರವಿ, ಡಾ.ಎಚ್.ಎಂ.ಲೋಕೇಶ್, ಆಡಳಿತ ಅಧಿಕಾರಿ ಕೆ.ಡಿ.ಕಾಮಥ್, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.