ಮೈಸೂರು: ವಿದ್ಯಾರ್ಥಿಗಳು ಸಾಧ್ಯವಾದಷ್ಟು ಹೆಚ್ಚು ಭಾಷೆಗಳನ್ನು ಕಲಿಯಲು ಪ್ರಯತ್ನಿಸಬೇಕು. ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸತೀಶ್ ಬಿ.ಎಸ್. ಸಲಹೆ ನೀಡಿದರು.
ನಗರದ ವಿದ್ಯಾವರ್ಧಕ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ಸ್ನಾತಕೋತ್ತರ ವಿದ್ಯಾರ್ಥಿಗಳ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು. ವಾಣಿಜ್ಯ ವಿಷಯ ಕಲಿತ ವಿದ್ಯಾರ್ಥಿಗಳು ಇಂದು ವಿಶ್ವವನ್ನೇ ಆಳುವ ಸಾಮರ್ಥ್ಯ, ವಿಪುಲ ಅವಕಾಶ ಹೊಂದಿದ್ದಾರೆ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ, ಕಾರ್ಯಕ್ಷಮತೆ, ಸಾಧನೆ, ವಾಸ್ತವಿಕ ಸಮಯೋಚಿತ ಕ್ರಿಯೆ (ಸ್ಮಾರ್ಟ್) ಹೊಂದಿರಬೇಕು ಎಂದರು.
ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಿಜಿಟಲ್ ಯುಗದಲ್ಲಿ ಇ-ಕಾಮರ್ಸ್, ಇ-ವ್ಯಾಲೆಟ್, ಡಿಜಿಟಲ್ ಪಾವತಿ ಜ್ಞಾನ ಹೊಂದಿರಬೇಕು ಎಂದು ತಿಳಿಸಿದರು.
ಆಡಳಿತ ನಿರ್ದೇಶಕ ಟಿ. ನಾಗರಾಜು , ವಿದ್ಯಾರ್ಥಿನಿಯರಾದ ವೈಷ್ಣವಿ, ಮುಸ್ಕಾನ ಬಾನು, ನಬಿಹ ಬಾನು ಕೆ., ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.