ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಉಳ್ಳವರಿಂದಲೇ ದೇಶಕ್ಕೆ ಕುತ್ತು: ಪ್ರೊ.ರಹಮತ್ ತರೀಕೆರೆ

ಉಪನ್ಯಾಸ ಕಾರ್ಯಕ್ರಮದಲ್ಲಿ ವಿಮರ್ಶಕ ಪ್ರೊ.ರಹಮತ್ ತರೀಕೆರೆ ಆತಂಕ
Last Updated 26 ಜನವರಿ 2022, 11:07 IST
ಅಕ್ಷರ ಗಾತ್ರ

ಮೈಸೂರು: ‘ಅಧಿಕಾರ ಉಳ್ಳವರಿಂದಲೇ ದೇಶಕ್ಕೆ ಕುತ್ತು ಬರುವ ಸೂಚನೆ ಕಂಡುಬರುತ್ತಿದೆ. ಸರ್ವಾಧಿಕಾರದ ರೂಪಗಳು ಮೈದಳೆಯುತ್ತಿವೆ’ ಎಂದು ವಿಮರ್ಶಕ ಪ್ರೊ.ರಹಮತ್ ತರೀಕೆರೆ ಆತಂಕ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರವು ವಿಶ್ವಜ್ಞಾನಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ನಡಿಗೆ: ಸಾಗಲಿ ಬೌದ್ಧ ಗಣರಾಜ್ಯೋತ್ಸವದ ಕಡೆಗೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಂವಿಧಾನದ ಪೀಠಿಕೆ ಮತ್ತು ಭಾರತದ ಪರಿಕಲ್ಪನೆ’ ಕುರಿತು ಅವರು ಮಾತನಾಡಿದರು.

‘ಸಾಮಾಜಿಕ, ಆರ್ಥಿಕ ಸಮಾನತೆ ಸಿಗದ ಹೊರತು ರಾಜಕೀಯ ಸಮಾನತೆ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಆದರೆ, ರಾಜಕೀಯ ಸಮಾನತೆ ಸಿಕ್ಕರೂ ಸಾಮಾಜಿಕ, ಆರ್ಥಿಕ ಸಮಾನತೆ ಸಿಗದಿರುವುದು ವಿರೋಧಾಭಾಸ. ಅಸಮಾನತೆಗೆ ಬಲಿಪಶುಗಳಾಗುವವರಿಂದ ದೇಶಕ್ಕೆ ಕುತ್ತುಬರುತ್ತದೆ ಎಂದು ಅಂಬೇಡ್ಕರ್ ಎಚ್ಚರಿಸಿದ್ದರು. ಆದರೆ, ಈಗ ಅಧಿಕಾರ ಉಳ್ಳವರು ಹಾಗೂ ಅದನ್ನು ಮುಂದುವರಿಸಿಕೊಂಡು ಹೋಗಲು ಬಯಸುವವರು ಈ ದೇಶವನ್ನು ನಾಶ ಮಾಡುವಂತಹ ಸೂಚನೆ ಕಂಡುಬರುತ್ತಿದೆ. ಕೆಲ ರಾಜ್ಯಗಳಲ್ಲಿ ಸರ್ವಾಧಿಕಾರ ಮೈದಳೆಯುತ್ತಿದೆ. ಕೆಲವರು ಧರ್ಮ ಆಧಾರಿತ ದೇಶವನ್ನು ಕಟ್ಟಬೇಕು ಎನ್ನುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅನ್ಯಾಯ, ಅಸಮಾನತೆ ವಿರುದ್ಧ ಹೋರಾಡುವವರು, ಚಿಂತಕರು, ಸಾಹಿತಿಗಳನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಗೋವಿಂದ ಪನ್ಸಾರೆ, ನರೇಂದ್ರ ದಾಭೋಲ್ಕರ್, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅಂತಹವರ ಹತ್ಯೆಯಾಗಿದೆ. ಸಂವಿಧಾನವನ್ನು ಸುಡುವ ಕೆಲಸವೂ ನಡೆಯುತ್ತಿದೆ. ಸಂವಿಧಾನ ಅವಸಾನದ ಕುರಿತು ಕಾಲೇಜೊಂದರಲ್ಲಿ ಪ್ರಬಂಧ ಮಂಡನೆ/ ಚರ್ಚಾಗೋಷ್ಠಿ ಏರ್ಪಡಿಸಲಾಗಿದೆ’ ಎಂದು ದೂರಿದರು.

‘ಸಂವಿಧಾನವನ್ನು ಓದುವ, ಅರ್ಥೈಸುವ ಹಾಗೂ ಆಶಯಗಳನ್ನು ಜಾರಿಗೊಳಿಸುವ ಕೆಲಸವನ್ನು ಪ್ರಜ್ಞಾವಂತ ನಾಗರಿಕರು ಮಾಡಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಮಾತನಾಡಿ, ‘ದೇಶದಲ್ಲಿ ಪ್ರಾಚೀನ ಕಾಲದಲ್ಲೇ ಗಣರಾಜ್ಯ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಆದರೆ, ನಮ್ಮ ತಪ್ಪಿನಿಂದಾಗಿ ಅದನ್ನು ಕಳೆದುಕೊಳ್ಳಬೇಕಾಯಿತು. ಅಂಬೇಡ್ಕರ್ ಅವರು ಬಲಿಷ್ಠ ಗಣರಾಜ್ಯವನ್ನು ಸ್ಥಾಪಿಸಲು ಶ್ರಮಿಸಿದ್ದರು. ಬುದ್ಧನ ಮೈತ್ರಿ ಹಾಗೂ ಕರುಣೆಯ ಪರಿಕಲ್ಪನೆಯನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಬುದ್ಧ ಗುರುವನ್ನು ಮರಳಿ ಭಾರತಕ್ಕೆ ತಂದ ಕೀರ್ತಿ ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ’ ಎಂದರು.

‘ವಿಜ್ಞಾನ, ತಂತ್ರಜ್ಞಾನದಲ್ಲಿ ನಾವು ಸಾಕಷ್ಟು ಮುಂದುವರಿದಿದ್ದೇವೆ. ಆದರೆ, ಮಾನವೀಯತೆ ವಿಚಾರದಲ್ಲಿ ಎಲ್ಲಿದ್ದೇವೆ? ತಂತ್ರಜ್ಞಾನದ ಪ್ರಗತಿಯೊಂದಿಗೆ ಮಾನವೀಯ ಮೌಲ್ಯಗಳೂ ನಮ್ಮಲ್ಲಿ ಉತ್ತಮಗೊಳ್ಳಬೇಕು’ ಎಂದು ಹೇಳಿದರು.

ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಆಜೀವ ಸದಸ್ಯ ಪ್ರೊ.ಎಂ.ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಪ್ರಾಧ್ಯಾಪಕ ಜೆ.ಸೋಮಶೇಖರ್ ಇದ್ದರು.

***

ತಳಸಮುದಾಯದವರು ಆರ್ಥಿಕ, ರಾಜಕೀಯ ಸಮಾನತೆ ಪಡೆದು ಪ್ರಗತಿ ಸಾಧಿಸಿದರೂ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಅದು ತೃಪ್ತಿದಾಯಕವಾಗಿಲ್ಲ.

–ಪ್ರೊ.ಜಿ. ಹೇಮಂತಕುಮಾರ್, ಮೈಸೂರು ವಿ.ವಿ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT