ಎಚ್.ಡಿ.ಕೋಟೆ: ಪಟ್ಟಣದ ಸಮೀಪದಲ್ಲಿರುವ ಕಟ್ಟೇಮನುಗನಹಳ್ಳಿ ಗ್ರಾಮದಲ್ಲಿ ರೈತ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಕರುವೊಂದನ್ನು ಹುಲಿಯು ಬಲಿ ಪಡೆದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಮೊತ್ತ ಗ್ರಾಮದ ಬಳಿ ಹುಲಿಯ ಹೆಜ್ಜೆಯ ಗುರುತುಗಳು ಪತ್ತೆಯಾಗಿದ್ದ ಬೆನ್ನಲ್ಲೇ ಪಟ್ಟಣದ ಸಮೀಪದ ಕಟ್ಟೇಮನುಗನಹಳ್ಳಿ ಗ್ರಾಮದ ಕೆಂಡಗಣ್ಣಪ್ಪ ಅವರ ಹಸುವನ್ನು ರಾತ್ರಿ 8 ಗಂಟೆಯಲ್ಲಿ ಬಲಿ ಪಡೆದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಹುಟ್ಟಿದೆ.
ಹುಲಿ ಹಸುವನ್ನು ದಾಳಿ ಮಾಡುತ್ತಿರುವುದನ್ನು ಕಂಡ ಕೆಂಡಗಣ್ಣಸ್ವಾಮಿ, ಲೋಕೇಶ್, ಗುರುಸ್ವಾಮಿ ಹಾಗೂ ಗ್ರಾಮಸ್ಥರು ಕಲ್ಲು ಹೊಡೆಯುವ ಮೂಲಕ ಹುಲಿಯನ್ನು ಓಡಿಸಿದರು.
ಹುಲಿಯು ಪಕ್ಕದಲ್ಲಿಯೇ ಇದ್ದ ಪೊದೆಯಲ್ಲಿ ಅಡಗಿಕೊಂಡಿದೆ. ಇದರಿಂದ ಗ್ರಾಮಸ್ಥರು ತೀವ್ರ ಅತಂಕಗೊಂಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.