ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಗರದ ವಿವಿಧೆಡೆ ಬುಧವಾರ ರೋಡ್ ಶೋ ನಡೆಸಿ ಮತ ಯಾಚಿಸಿದರು.
ಅಶೋಕಪುರಂನ ರೈಲ್ವೆ ಕಾರ್ಯಾಗಾರ, ಬೆಮೆಲ್ ನಗರ, ವಿವೇಕಾನಂದ ನಗರ ವೃತ್ತ, ಶಿವಪುರ ದಲಿತರ ಕಾಲೊನಿ, ದೇವಯ್ಯನ ಹುಂಡಿ, ಡಿಪೊ ವೃತ್ತದಿಂದ ಶಾಂತಿಸಾಗರ ಹೋಟೆಲ್ ಸಮೀಪದವರೆಗೆ ರೋಡ್ ಶೋ, ಜಯನಗರದಲ್ಲಿ ರೋಡ್ ಶೋ ನಡೆಸಿ ಜನರಿಂದ ಬೆಂಬಲ ಕೋರಿದರು. ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯದುವೀರ್, ‘ದೇಶವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಕ್ಕಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕಾದ ಅಗತ್ಯವಿದೆ. ನಮ್ಮ ರಾಜಮನೆತನದವರು ಮೈಸೂರು ರಾಜ್ಯವನ್ನು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೊಡುಗೆ ನೀಡಿದ್ದರು. ಸ್ವದೇಶಿ ಉತ್ಪನ್ನಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುವ ಮೂಲಕ ಪ್ರಧಾನಿಯು ನಮ್ಮ ಬ್ರ್ಯಾಂಡ್ಗಳನ್ನು ಉತ್ತೇಜಿಸುತ್ತಿದ್ದಾರೆ’ ಎಂದರು.
‘ಪ್ರಚಾರದ ವೇಳೆ ಜನಸಾಮಾನ್ಯರ ಸಮಸ್ಯೆಗಳು ಅರಿವಿಗೆ ಬರುತ್ತಿವೆ. ಅವುಗಳನ್ನು ಬಗೆಹರಿಸಲು ಅಧಿಕಾರದ ಅವಶ್ಯಕತೆ ಇದ್ದು, ಎಲ್ಲರೂ ಬೆಂಬಲಿಸಬೇಕು’ ಎಂದು ಕೋರಿದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ಯದುವೀರ್ ಅವರಿಗೆ ಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು’ ಎಂದು ಕೋರಿದರು.
ಮಾಜಿ ಮೇಯರ್ ಶಿವಕುಮಾರ್, ಮಾಜಿ ಉಪ ಉಪಮೇಯರ್ ಶೈಲೇಂದ್ರ, ವಿಶ್ವೇಶ್ವರಯ್ಯ, ನಾಗರಾಜು, ಪಿ.ಟಿ.ಕೃಷ್ಣ, ಬಿ.ವಿ.ಮಂಜುನಾಥ್, ಜಯನಗರದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ ಜತೆಗಿದ್ದರು.