ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯದುವೀರ್ ಆಯ್ಕೆ ಒಳ್ಳೆಯದು: ಎಸ್‌.ಎಲ್‌ ಭೈರಪ್ಪ

Published 29 ಮಾರ್ಚ್ 2024, 13:57 IST
Last Updated 29 ಮಾರ್ಚ್ 2024, 13:57 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಟಿಕೆಟ್ ನೀಡಿರುವುದು ಒಳ್ಳೆಯದು. ಸಂಸದ ಪ್ರತಾಪ ಸಿಂಹ ಅವರಿಗೆ ಟಿಕೆಟ್‌ ತಪ್ಪಿದ್ದರೂ ಮುಂದೆ ಇತರ ಅವಕಾಶಗಳಿವೆ’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಪ್ರತಾಪ ಆಕ್ರಮಕಾರಿ ಸ್ವಭಾವದ ನಾಯಕ. ಸಂಸದನಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಮುಂದೆಯೂ ಸಾಕಷ್ಟು ಜವಾಬ್ದಾರಿಗಳಿವೆ. ಸಂಸದನಾದರೆ ಕೇವಲ ಕ್ಷೇತ್ರಕ್ಕೆ ಸೀಮಿತವಾಗಬೇಕಾಗುತ್ತದೆ. ಇಲ್ಲದಿದ್ದರೆ ಎಲ್ಲ ಕಡೆಯೂ ಕೆಲಸ ಮಾಡಬಹುದಾಗಿದೆ’ ಎಂದರು.

‘ಎಡಪಂಥೀಯ ಸಾಹಿತಿಗಳು ಡಬಲ್ ಗೇಮ್ ಆಡುತ್ತಿದ್ದಾರೆ. ಅವರ ಡಬಲ್ ಗೇಮ್ ಮನಸ್ಥಿತಿ ಹಲವು ಬಾರಿ ಸಾಬೀತಾಗಿದೆ. ತತ್ವ– ಸಿದ್ಧಾಂತಗಳ ವಿಚಾರದಲ್ಲೂ ಎಡಪಂಥೀಯ ಸಾಹಿತಿಗಳದ್ದು ದ್ವಿಮುಖ ನಿಲುವು’ ಎಂದು ಟೀಕಿಸಿದರು.

‘ಪಶ್ಚಿಮ ಬಂಗಾಳದಲ್ಲಿ ಇರುವಷ್ಟು ಬಡತನ ದೇಶದ ಬೇರಾವ ರಾಜ್ಯದಲ್ಲೂ ಇಲ್ಲ. ಎಡಪಂಥೀಯ ಧೋರಣೆ ಎನ್ನುವುದು ಬರಿ ಮೋಸ ಮಾಡುವ ಕೆಲಸ. ಎಡಪಂಥೀಯರೆಲ್ಲರೂ ಅಪ್ರಾಮಾಣಿಕರು’ ಎಂದು ಕಿಡಿಕಾರಿದರು.

‘ಗುಜರಾತ್‌ನವರು ಕ್ರಿಯಾಶೀಲ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಅಂಗಡಿ ವ್ಯಾಪಾರಿಗಳು ಅಂದರೆ ಪೂರ್ಣ ಪ್ರಾಮಾಣಿಕರು ಎನ್ನಲಾಗುವುದಿಲ್ಲ. ಆದರೆ, ಗುಜರಾತ್‌ನಲ್ಲಿ ಮಕ್ಕಳ ಕೈಯಲ್ಲಿ ಹಣ ಕೊಟ್ಟು ಕಳುಹಿಸಿದರೂ ವ್ಯಾಪಾರಸ್ಥರು ಪ್ರಾಮಾಣಿಕವಾಗಿ ಚಿಲ್ಲರೆ ಕೊಟ್ಟು ಕಳುಹಿಸುತ್ತಾರೆ. ಗುಜರಾತಿಗಳು ಸುಳ್ಳು ಹೇಳುವುದಿಲ್ಲ. ಅಂತೆಯೇ ಮೋದಿಯೂ ಪ್ರಾಮಾಣಿಕವಾಗಿದ್ದಾರೆ. ಅವರು ವ್ಯಾಪಾರಿಯಾದರೂ ಪ್ರಾಮಾಣಿಕರಾಗಿದ್ದಾರೆ. ಅವರ ವ್ಯಾಪಾರ ಹಣಕ್ಕಾಗಿ ಅಲ್ಲ; ದೇಶಕ್ಕಾಗಿ’ ಎಂದು ವಿಶ್ಲೇಷಿಸಿದರು.

‘ಅವರು ಮುಖ್ಯಮಂತ್ರಿ ಹುದ್ದೆ ಬಿಟ್ಟು ನವದೆಹಲಿಗೆ ಬರುವಾಗ ಅವರ ಖಾತೆಯಲ್ಲಿದ್ದ ₹23 ಲಕ್ಷವನ್ನು ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಟ್ಟು ಬಂದರು. ಅದು ಮಾದರಿ ಎನಿಸಿತು. ಕೇಂದ್ರ ಸರ್ಕಾರದಲ್ಲೂ ಅದನ್ನು ಅಳವಡಿಸಿಕೊಂಡರು. ಕಾರು ಮಾರಾಟದಿಂದ ಹಣ ಬಂತು ಎನ್ನುವುದು ಆರ್ಥಿಕತೆ ಅಲ್ಲ. ಅದರಿಂದ ಎಷ್ಟು ಕುಟುಂಬಕ್ಕೆ ನೆರವಾಯಿತು ಎನ್ನುವುದು ನಿಜವಾದ ಆರ್ಥಿಕತೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದರಲ್ಲಿ ಅನುಮಾನವೇ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT