ತಿ.ನರಸೀಪುರ: ಕುಡಿಯುವ ನೀರು ಪೂರೈಸುವ ಟ್ಯಾಂಕ್ ನಿರ್ಮಾಣಕ್ಕೆ ನಿವೇಶನ ದಾನ ನೀಡಿದ ದಾನಿಗಳ ಹೆಸರನ್ನು ರಸ್ತೆಗೆ ಹಾಗೂ ಟ್ಯಾಂಕ್ ಮೇಲ್ಭಾಗದಲ್ಲಿ ಹಾಕುವಂತೆ ಬೈರಾಪುರ ಗ್ರಾಮ ಪಂಚಾಯಿತಿಗೆ ಸ್ಥಳೀಯ ಜೆಎಂಎಫ್ ನ್ಯಾಯಾಲಯ ನಿರ್ದೇಶನ ನೀಡಿದೆ.
ಪಂಚಾಯಿತಿ ವ್ಯಾಪ್ತಿಯ ರೆಡ್ಡಿ ಕಾಲೊನಿಯ ನಿವಾಸಿ, ಗುತ್ತಿಗೆದಾರ ಪಿ.ಚಿನ್ನರಾಖಿ ಅವರು ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿ ಸಿದ್ದರು. ಅರ್ಜಿದಾರರ ವಾದ ಪುರಸ್ಕೃರಿಸಿದ ಜೆಎಂ ಎಫ್ ನ್ಯಾಯಾಲಯದ ಕಿರಿಯ ನ್ಯಾಯಾಧೀಶ ಅಬ್ದುಲ್ ಖಾದರ್ ಈಚೆಗೆ ಈ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ವಿವರ: ಪಿ.ಚಿನ್ನರಾಖಿ ಅವರು ಸಾರ್ವಜ ನಿಕ ಆಸ್ಪತ್ರೆ ಪಕ್ಕದಲ್ಲಿ ಸುಮಾರು 120*75 ಅಳತೆಯ ನಿವೇಶನ ಹೊಂದಿದ್ದರು. 11 ವರ್ಷಗಳ ಹಿಂದೆ ಬೈರಾಪುರ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ನೀರು ಸಂಗ್ರಹಿಸುವ ಟ್ಯಾಂಕ್ ಇಲ್ಲದೆ ತೊಂದರೆಯಾಗಿತ್ತು.
ಚಿನ್ನರಾಖಿ ಅವರನ್ನು ಭೇಟಿ ಮಾಡಿದ ಅಂದಿನ ಬೈರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ನೀರಿನ ಟ್ಯಾಂಕ್ ನಿರ್ಮಾ ಣಕ್ಕೆ ನಿವೇಶನ ನೀಡುವಂತೆ ಮನವಿ ಮಾಡಿದ್ದರು. ಸಾರ್ವಜನಿಕರಿಗಾಗಿ ಒಳ್ಳೆಯ ಕಾರ್ಯಕ್ಕೆ ನೆರವಾಗುವುದಾಗಿ ತಮ್ಮ 30*75 ಅಳತೆ ನಿವೇಶನ ದಾನವಾಗಿ ಚಿನ್ನರಾಖಿ ನೀಡಿದ್ದರು.
ಆದರೆ, ಟ್ಯಾಂಕ್ಗೆ ಅಧಿಕ ಸ್ಥಳಾವಕಾಶ ಬೇಕಾದ ಕಾರಣದಿಂದ ಉಳಿದ ಭಾಗಕ್ಕೆ 2 ಲಕ್ಷ ರೂಪಾಯಿಯನ್ನು ಪಂಚಾ ಯಿತಿ ನೀಡಿತು. ಹೀಗಾಗಿ ಒಟ್ಟು 60* 75 ಅಡಿ ಅಳತೆಯ 10ರಿಂದ 12 ಲಕ್ಷ ಬೆಲೆ ಬಾಳುವ ನಿವೇ ಶನದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಗೊಂಡಿತು.
ನಿವೇಶನ ನೀಡಿದ್ದಕ್ಕೆ ರೆಡ್ಡಿ ಕಾಲೊನಿಯಲ್ಲಿ ಚಿನ್ನರಾಖಿ ಅವರ ನಿವಾಸದ ರಸ್ತೆಗೆ `ಚಿನ್ನರಾಖಿ' ಎಂದು ಹೆಸರಿಡುವ ಹಾಗೂ ನೀರಿನ ಟ್ಯಾಂಕ್ ಮೇಲೆ ಚಿನ್ನರಾಖಿ ಮತ್ತು ಅವರ ಪತ್ನಿಯ ಹೆಸರು ಹಾಕುವ ಹಾಗೂ ಐದು ವರ್ಷಗಳ ಕಾಲ ರೂ.50 ಲಕ್ಷ ಮೊತ್ತದ ಕಾಮಗಾರಿಯ ಗುತ್ತಿಗೆ ಕೊಡಿಸುವುದಾಗಿ ಅಂದಿನ ಪಂಚಾಯಿತಿ ಅಧ್ಯಕ್ಷರು ಲಿಖಿತ ಭರವಸೆ ನೀಡಿದರು.
ಜನಪ್ರತಿನಿಧಿಗಳು, ಶಾಸಕರ ಸಮ್ಮುಖದಲ್ಲಿ ಈ ಕಾರ್ಯ ನಡೆದಿತ್ತು. ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣದ ನಂತರ ಪಂಚಾಯಿತಿ ಆಡಳಿತ ಚಿನ್ನರಾಖಿ ಅವರಿಗೆ ನೀಡಿದ್ದ ಯಾವ ಭರವಸೆಗಳ ಈಡೇರಲಿಲ್ಲ.
ಇದರ ವಿರುದ್ಧ ಈ ವರ್ಷದ ಮಾರ್ಚ್ ತಿಂಗಳಲ್ಲಿ ಚಿನ್ನ ರಾಖಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ದರು. ಪಂಚಾಯಿತಿ ನೀಡಿದ ಭರವಸೆ, ಲಿಖಿತ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ ಕಳೆದ ತಿಂಗಳು 20ರಂದು ಈ ಆದೇಶ ನೀಡಿದೆ.ಚಿನ್ನರಾಖಿ ಪರ ಎ.ಎಲ್. ಶಬ್ಬೀರ್ ಅಹಮದ್ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.