ಮೈಸೂರು: ಇಲ್ಲಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಚಿರತೆ ಮರಿಗಳ ಸಾವು ಮುಂದುವರಿದಿದ್ದು, ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದ ನಾಲ್ಕು ತಿಂಗಳ ಮತ್ತೊಂದು ಗಂಡು ಚಿರತೆ ಮರಿ ಬುಧವಾರ ಬೆಳಿಗ್ಗೆ ಮೃತಪಟ್ಟಿದೆ.
ಈ ಮರಿಯು `ಬೃಂದಾ~ ಎಂಬ ಬೇಟೆ ಚಿರತೆಯ ಮರಿಗಳಲ್ಲಿ ಒಂದಾಗಿತ್ತು. ಈ ಮರಿಯು ಹುಟ್ಟಿನಿಂದಲೇ ಕಾಲಿನ ಶಕ್ತಿ ಕಳೆದುಕೊಂಡಿದ್ದು, ಕುಂಟುತ್ತಲೇ ಹೆಜ್ಜೆ ಹಾಕುತ್ತಿತ್ತು. ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ನಿರಂತರವಾಗಿ ಚಿಕಿತ್ಸೆ ನೀಡಿದರೂ, ಗಾಯ ವಾಸಿಯಾಗದೆ ಬುಧವಾರ ಬೆಳಿಗ್ಗೆ 11 ಗಂಟೆಗೆ ಮೃತಪಟ್ಟಿತು. ಮರಣೋತ್ತರ ಪರೀಕ್ಷೆಯ ಬಳಿಕ ಪೂರ್ಣ ವಿವರ ಗೊತ್ತಾಗಲಿದೆ.
ಮರಿಗಳಿಗೆ ಕನಿಷ್ಠ ಆರು ತಿಂಗಳವರೆಗೆ ತಾಯಿಯ ಹಾಲು ನೀಡಬೇಕು. ಆದರೆ, ತಾಯಿ `ಬೃಂದಾ~ ಮೃತಪಟ್ಟಿರುವುದರಿಂದ ಮರಿಗಳು ಸಾವನ್ನಪ್ಪುತ್ತಿವೆ. ಚಿರತೆ ಮರಿಗಳ ಸಾವಿನ ಬಗ್ಗೆ ನಿಖರ ಕಾರಣ ತಿಳಿಯಲು ಮೈಸೂರಿಗೆ ಬರುವಂತೆ ದಕ್ಷಿಣ ಆಫ್ರಿಕಾದ ಮೃಯಾಲಯದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 12 ರಂದು ಹೆಣ್ಣು ಚಿರತೆ ಮಾಯಾ ಮೃತಪಟ್ಟಿತ್ತು. ಈ ಚಿರತೆಯ ಐದು ಮರಿಗಳಲ್ಲಿ ಒಂದು ಮರಿ ಜೂನ್ 26 ರಂದು ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಮತ್ತೊಂದು ಮರಿ ಜುಲೈ 10ರಂದು ಮೃತಪಟ್ಟಿತ್ತು. ಇದೀಗ ಗಂಡು ಮರಿ ಸಾವಿನಿಂದ ನಾಲ್ಕು ಮರಿಗಳು ಮೃತಪಟ್ಟಂತಾಗಿದೆ.