ಮೈಸೂರು: 2016-–17ನೇ ಹಣಕಾಸು ವರ್ಷ ಮುಗಿಯುತ್ತ ಬಂದರೂ ಶೇ 46.94ರಷ್ಟು ಮಾತ್ರ ಸಂಪನ್ಮೂಲ ಸಂಗ್ರಹ ಕಾರ್ಯ ನಡೆದಿದೆ ಎಂಬ ಅಂಶ ಪಾಲಿಕೆಯಲ್ಲಿ ಬುಧವಾರ ನಡೆದ 2017–18ರ ಬಜೆಟ್ನ ಸಾರ್ವಜನಿಕರ 2ನೇ ಸುತ್ತಿನ ಸಮಾಲೋಚನಾ ಸಭೆಯಲ್ಲಿ ಬೆಳಕಿಗೆ ಬಂದಿತು.
2015-–16ನೇ ಸಾಲಿನ ಸಂಪನ್ಮೂಲ ಸಂಗ್ರಹಣೆಯಲ್ಲಿ ಶೇ 67.77ರಷ್ಟು ಪ್ರಗತಿ ದಾಖಲಿಸಲಾಗಿತ್ತು. ಪ್ರಸಕ್ತ ಹಣಕಾಸು ವರ್ಷ ಮುಗಿಯುವುದಕ್ಕೆ ಎರಡೂವರೆ ತಿಂಗಳಷ್ಟೇ ಬಾಕಿ ಉಳಿದಿರುವಾಗ ಸಂಪನ್ಮೂಲ ಸಂಗ್ರಹ ಶೇ 50ರಷ್ಟೂ ದಾಟಿಲ್ಲ ಎಂಬ ಸಂಗತಿ ಸಾಕಷ್ಟು ಟೀಕೆಗೆ ಒಳಗಾಯಿತು.
ಪ್ರಜ್ಞಾವಂತ ಮತ್ತು ಕಾಳಜಿವುಳ್ಳ ನಾಗರಿಕರ ವೇದಿಕೆಯ ಸಂಚಾಲಕ ಎಂ.ಲಕ್ಷ್ಮಣ ಮಾತನಾಡಿ, ಮೈಸೂರನ್ನು ಪಾರಂಪರಿಕ ನಗರಿ ಎಂದು ಘೋಷಿಸಲು ಪಾಲಿಕೆ ಪ್ರಸ್ತಾವ ಸಲ್ಲಿಸಬೇಕು. ಪಾರಂಪರಿಕ ನಗರಿ ಎಂದು ಘೋಷಣೆಯಾದರೆ ಕೇಂದ್ರ ಸರ್ಕಾರದಿಂದ ವಿಶೇಷಾನುದಾನ ಬರುತ್ತದೆ. ಅತಿಥಿಗೃಹ ನಿರ್ಮಾಣದಂತಹ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಎಂದು ಸಲಹೆ ನೀಡಿದರು.
ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ಕುಮಾರ್ ಜೈನ್ ಮಾತನಾಡಿ, ಆಸ್ತಿ ತೆರಿಗೆ ಹಾಗೂ ನೀರು ಬಳಕೆಗೆ ಕೈಗಾರಿಕೆಗಳಿಗೆಂದೇ ಪ್ರತ್ಯೇಕ ದರ ನಿಗದಿ ಮಾಡಬೇಕು. ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಪಾಲಿಕೆ ಕನಿಷ್ಠ ₹ 10 ಕೋಟಿಯನ್ನಾದರೂ ವ್ಯಯಿಸಬೇಕು ಎಂದು ಒತ್ತಾಯಿಸಿದರು.
ಇನ್ನಿತರ ಸಲಹೆಗಳು:
* ಅನಧಿಕೃತ ಬಡಾವಣೆಗಳಿಂದ ಕಂದಾಯ ವಸೂಲು ಮಾಡಿ, ಇಲ್ಲವೇ ಅಲ್ಲಿಗೆ ನೀಡುವ ಸೌಕರ್ಯಗಳನ್ನು ನಿಲ್ಲಿಸಿ– ದಕ್ಷಿಣಾಮೂರ್ತಿ, ಮಾಜಿ ಮೇಯರ್
* ‘ಮುಡಾ’ ಬಡಾವಣೆಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡರೆ ಸಂಪನ್ಮೂಲ ಸಂಗ್ರಹ ಹೆಚ್ಚಾಗುತ್ತದೆ– ಕೃಷ್ಣಸ್ವಾಮಿ, ‘ಮುಡಾ’ ಅಧಿಕಾರಿ
* ಕಸ ಸಂಗ್ರಹ, ಕಸ ವಿಂಗಡನೆಗೆ ಸರ್ಕಾರೇತರ ಸಂಸ್ಥೆಗಳ ನೆರವು ಪಡೆಯಿರಿ – ಮಂಜುಳಾ, ಸಾಮಾಜಿಕ ಕಾರ್ಯಕರ್ತೆ
* ಕಂದಾಯ ವಸೂಲಾತಿಯನ್ನು ಹೆಚ್ಚಿಸುವ ಮೂಲಕ ಸಂಪನ್ಮೂಲ ಸಂಗ್ರಹಕ್ಕೆ ಮುಂದಾಗಬೇಕು– ಮಹೇಂದ್ರ, ಮೈಸೂರು ಗ್ರಾಹಕ ಪರಿಷತ್
* ವಲಯ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಬೇಕು– ಪಾಲಿಕೆಯ ನಿವೃತ್ತ ಕಮಿಷನರ್ ಶಿವಸಾಲಿ
**
ಸಂಪತ್ತಿನ ಕ್ರೋಡೀಕರಣ
ಪಾಲಿಕೆ ಪ್ರಸಕ್ತ ಸಾಲಿನ ಸಂಪನ್ಮೂಲ ಸಂಗ್ರಹಣೆಯಲ್ಲಿ ತೀರಾ ನಿರಾಶದಾಯಕ ಪ್ರಗತಿ ದಾಖಲಿಸಿದೆ. ಮಾರುಕಟ್ಟೆ ಹಾಗೂ ಮಳಿಗೆಗಳ ಬಾಡಿಗೆ ವಸೂಲಾತಿಯಲ್ಲಿ ಮಾತ್ರ ಕಳೆದ ಸಾಲಿ ಗಿಂತ ಮುಂದಿದೆ. ಉಳಿದಂತೆ, ಎಲ್ಲಾ ವಿಭಾಗಗಳಲ್ಲೂ ಹಿಂದಿದೆ. ಸದ್ಯ, ಪ್ರಸಕ್ತ ಸಾಲು ಮುಗಿಯುವುದಕ್ಕೆ ಎರಡೂವರೆ ತಿಂಗಳಷ್ಟೇ ಬಾಕಿ ಉಳಿದಿದೆ