‘ಗ್ರಾಮದಲ್ಲಿ ಗಾಂಧೀಜಿ ವೃತ್ತ ನಿರ್ಮಿಸುವಂತೆ ಆಗ್ರಹಿಸಿ 25 ವರ್ಷ ಅವಿರತವಾಗಿ ಕೇವಲ ಪಂಚೆ ಧರಿಸಿ, ಒಂದೇ ಹೊತ್ತು ಆಹಾರ ಸೇವಿಸಿ, ಗಾಂಧಿಗಿರಿ ಮೂಲಕ ಅಂದು ಸಂಸದರಾಗಿದ್ದ ಬಸನಗೌಡ ಪಾಟೀಲ ಯತ್ನಾಳರ ಗಮನ ಸೆಳೆದರು. ₹1.60 ಲಕ್ಷ ಸಂಸದರ ಅನುದಾನದಡಿ, ಗಂಗನಹಳ್ಳಿ-ಚಿಕ್ಕರೂಗಿ ಗ್ರಾಮ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಗಾಂಧಿ ಪ್ರತಿಮೆಯೊಳಗೊಂಡ ವೃತ್ತ ನಿರ್ಮಿಸುವುದರ ಮೂಲಕ 2003-04ರಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗುವಂತೆ ಶ್ರಮಿಸಿದರು’ ಎಂದು ಗ್ರಾಮದ ಹಿರಿಯರಾದ ಅಪ್ಪಾರಾಯ ಬಿರಾದಾರ ಹಾಗೂ ಎಂ.ಎಂ.ಪಾಟೀಲ ವೃತ್ತ ನಿರ್ಮಾಣದ ಹಿನ್ನೆಲೆಯನ್ನು ಬಿಚ್ಚಿಟ್ಟರು.