ಮನಗೂಳಿ: ‘ಪ್ರತಿಭಾ ಕಾರಂಜಿಯು ಮಕ್ಕಳ ಪ್ರತಿಭೆಗೆ ವೇದಿಕೆಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಂದ್ರಶೇಖರಗೌಡ ಪಾಟೀಲ ಹೇಳಿದರು.
ಪಟ್ಟಣದ ಸಮೂಹ ಸಂಪನ್ಮೂಲ ಕೇಂದ್ರ–1ರಿಂದ ಆರ್.ಎಂ.ಗುಂಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರತಿಭಾ ಕಾರಂಜಿಯು ಮಕ್ಕಳ ಆಸಕ್ತಿಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಿದೆ. ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮೂಹ ಸಂಪನ್ಮೂಲ ವ್ಯಕ್ತಿ ಚಿದಾನಂದ ಎಸ್.ಬಾಗೇವಾಡಿ, ‘ನಿಷ್ಪಕ್ಷಪಾತವಾಗಿ ಎಲ್ಲಾ ಸ್ಪರ್ಧೆಗಳನ್ನು ನಡೆಸಿ, ಮಕ್ಕಳಿಗೆ ನ್ಯಾಯ ಸಮ್ಮತ ನಿರ್ಣಯವನ್ನು ನೀಡಬೇಕು’ ಎಂದರು.
ಸಂಗನಬಸವ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ರೇವಣಸಿದ್ಧ ಮಣೂರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಟಿ.ಎ.ಯರಗುದ್ರಿ, ಕೌಟಿಲ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಠ್ಠಲ ಗಣಿ ಇದ್ದರು.
15 ಶಾಲೆಗಳ ಸುಮಾರು 25 ಜನ ಶಿಕ್ಷಕರು, 20 ಜನ ನಿರ್ಣಾಯಕರು ಹಾಗೂ 250 ಜನ ವಿದ್ಯಾರ್ಥಿಗಳು ಹಾಜರಿದ್ದರು.