ಮಾನ್ವಿ: ಕಲುಷಿತ ನೀರು ಸೇವನೆಯಿಂದ 40ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದ ತಾಲ್ಲೂಕಿನ ಜೂಕೂರು, ವಲ್ಕಂದಿನ್ನಿ ಗ್ರಾಮಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ನಿಖಿಲ್ ಬಿ,ಜಿಲ್ಲಾ ಪಂಚಾಯಿತಿ ಸಿಇಒ ನೂರ್ ಜಹಾರ್ ಖಾನಂ, ಉಪವಿಭಾಗಾಧಿಕಾರಿ ರಜನೀಕಾಂತ, ತಹಶೀಲ್ದಾರ್ ಎಲ್.ಡಿಚಂದ್ರಕಾಂತ ಸೋಮವಾರ ಭೇಟಿ ನೀಡಿದ್ದರು.
ಉಭಯ ಗ್ರಾಮಗಳಲ್ಲಿ ಸ್ಥಾಪಿಸ ಲಾದ ತಾತ್ಕಾಲಿಕ ಒಪಿಡಿ ಚಿಕಿತ್ಸಾ ಕೇಂದ್ರಗಳಿಗೆ ತೆರಳಿ, ವಾಂತಿ ಭೇದಿ ಪ್ರಕರಣ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ಅವರಿಂದ ನಿಖಿಲ್ ಅವರು ಮಾಹಿತಿ ಪಡೆದರು.
ಬಳಿಕ ಮಾತನಾಡಿದ ನಿಖಿಲ್, ‘ಗ್ರಾಮಸ್ಥರು ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಬೇಯಿಸಿದ ನೀರನ್ನೇ ಕುಡಿಯಬೇಕು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಕುರಿತು ತಿಳಿವಳಿಕೆ ಮೂಡಿಸಬೇಕು’ ಎಂದು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ಮಾತನಾಡಿ, ‘ವಾಂತಿ ಭೇದಿಯಿಂದ ಅಸ್ವಸ್ಥಗೊಂಡ ವರ ಪೈಕಿ ವಲ್ಕಂದಿನ್ನಿಯ 11 ಹಾಗೂ ಜೂಕೂರು ಗ್ರಾಮದ ನಾಲ್ವರು ಚೇತರಿಸಿಕೊಂಡಿದ್ದಾರೆ. ಉಳಿದವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.ಅಗತ್ಯ ಔಷದಿಗಳನ್ನು ಪೂರೈಸಲಾಗಿದೆ. ಕಾಲುವೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದರು.
ತಾ.ಪಂ. ಇಒ ಅಣ್ಣಾರಾವ್, ಪರಿಶಿಷ್ಟ ವರ್ಗಗಳ ತಾಲ್ಲೂಕು ಅಧಿಕಾರಿ ಚಂದ್ರಶೇಖರ ನಂದಿಹಾಳ, ಎಇಇ ಶಶಿಕಾಂತ, ಕಂದಾಯ ನಿರೀಕ್ಷಕ ಹನುಮಂತಪ್ಪ, ಗ್ರಾ.ಪಂ ಸದಸ್ಯರಾದ ರಾಜಶೇಖರಸ್ವಾಮಿ ವಲ್ಕಂದಿನ್ನಿ, ಕೆ.ಗುರುಸ್ವಾಮಿ ಕಂಬಳತ್ತಿ ಇದ್ದರು.