ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 429ನೇ ವರ್ಧಂತಿ ಉತ್ಸವದ ಪ್ರಯುಕ್ತ ಮಂತ್ರಾಲಯ ಮಠದ ಆವರಣದಲ್ಲಿ ಶನಿವಾರ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ತಿರುಮಲ ತಿರುಪತಿ ದೇವಸ್ಥಾನದ ಜೆಇಒ ವೀರಬ್ರಹ್ಮಮ್ ಅವರು ತಿರುಮಲ ತಿರುಪತಿ ದೇವಸ್ಥಾನದಿಂದ ತಂದ ಪವಿತ್ರ ಶ್ರೀವಾರಿ ಶೇಷವಸ್ತ್ರವನ್ನು ಮಠದ ಅಧಿಕಾರಿಗಳು ಗೌರವದಿಂದ ಸ್ವೀಕರಿಸಿದರು. ನಂತರ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಮಠದ ಪೀಠಾಧೀಶರಾದ ಸುಬುಧೇಂದ್ರ ತೀರ್ಥ ಸ್ವಾಮೀಜಿ ವಿಧ್ಯುಕ್ತವಾಗಿ ಶ್ರೀವಾರಿ ವಸ್ತ್ರವನ್ನು ಅರ್ಪಿಸಿದರು.
ರಾಯರ ಭಕ್ತರಾದ ಶ್ರೀನಿವಾಸಮೂರ್ತಿಯವರು ಶ್ರೀ ಬ್ರಹ್ಮ ಕರಾರ್ಚಿತ ಶ್ರೀಮೂಲ ರಾಮದೇವರಿಗೆ ‘ವೈಜಯಂತಿ ವನಮಾಲಾ’ ದಾನ ಮಾಡಿದರು. ಬಳಿಕ ಮೂಲ ಬೃಂದಾವನಕ್ಕೆ ಮಹಾ ಪಂಚಾಮೃತಾಭಿಷೇಕ, ನವರತ್ನ ರಥಕ್ಕೆ ಮಂಗಳಾರತಿ ಮಾಡಿದರು.
ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಾದಹರಂ ಟ್ರಸ್ಟ್ನ 350 ಕಲಾವಿದರು ರಾಯರಿಗೆ ನಾದಹರ ಸೇವೆ ಸಲ್ಲಿಸಿದರು. ನೆರೆದಿದ್ದ ಅಪಾರ ಭಕ್ತರ ತನ್ಮನ ಪುಳಕಿತಗೊಳಿಸಿದರು.
ಶ್ರೀ ರಾಘವೇಂದ್ರ ಸ್ವಾಮಿಗಳ 429ನೇ ವರ್ಧಂತಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಕನ್ನಡ ಚಲನಚಿತ್ರ ನಟ ಜಗ್ಗೇಶ ಅವರಿಗೆ ಶ್ರೀ ಸುಬುಧೇಂದ್ರ ತೀರ್ಥರು ಶಾಲು ಹೊದಿಸಿ ಗೌರವಿಸಿದರು.
ಪ್ರಶಸ್ತಿ ಪ್ರದಾನ: ವಿಜಯವಾಡದ ವಿರೂಪಾಕ್ಷಂ ಶ್ಯಾವಶ್ವ ಮಹರ್ಷಿ, ಟಿಟಿಡಿ ವಿಶೇಷ ಅಧಿಕಾರಿ ಆಕೆಲ್ಲ ವಿಭೀಷಣ ಶರ್ಮಾ, ಬೆಂಗಳೂರಿನ ಮಧುಮೇಹ ತಜ್ಞ ಡಾ.ಸಂಜಯ್ ಅನಂತ ಕೃಷ್ಣ, ನವದೆಹಲಿಯ ಮಾಧ್ವ ಸಂಘದ ಅಧ್ಯಕ್ಷ ಮಧುಸೂದನ್ ರಾವ್, ಮುಂಬೈನ ಸಾಮಾಜಿಕ ಕಾರ್ಯಕರ್ತೆ ಅರುಣಾ ಆಚಾರ್ಯ, ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಕೆ.ಸುರೇಶಕುಮಾರ, ಪರಿಮಳ ಗೆಳೆಯರ ಬಳದ ಎಸ್.ಜಯಸಿಂಹ ಅವರಿಗೆ ಶ್ರೀಮಠದಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಂತರ ಸಂಪ್ರತಿ ಮೋಹನ್ ಮತ್ತು ತಂಡದಿಂದ ದಾಸವಾಣಿ, ಮೆಟ್ಟೂರು ಸಹೋದರರಿಂದ ಕರ್ನಾಟಕ ಗಾಯನ, ವಿದುಷಿ ಆಶಿಕಾ ಅವರಿಂದ ಸೇಲಂ ಮತ್ತು ಭರತನಾಟ್ಯ ಪ್ರದರ್ಶನ ನಡೆಯಿತು. ಭಕ್ತರು ಭಾರಿ ಸಂಖ್ಯೆಯಲ್ಲಿದ್ದರು. ತುಂಗಭದ್ರಾ ನದಿ ಬತ್ತಿದ್ದರಿಂದ ಸ್ವಲ್ಪತೊಂದರೆ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.