ರಾಯಚೂರು: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಂಕಾ ಗಾಂಧಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸದಸ್ಯರು ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.
ಗುಂಡಿನ ದಾಳಿಗೆ ಒಳಗಾಗಿ ಪ್ರಾಣತೆತ್ತ ಬುಡಕಟ್ಟು ಸಮುದಾಯದ ಕುಟುಂಬದವರನ್ನು ಭೇಟಿ ಮಾಡಲು ಸೋನ್ಭದ್ರಕ್ಕೆ ಹೊರಟಿದ್ದ ಪ್ರಿಯಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಪೊಲೀಸರಿಂದ ಬಂಧನ ಮಾಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತರಿಗೆ ಸಾಂತ್ವನ ಹೇಳುವುದು ಜನಪ್ರತಿನಿಧಿಗಳ ಕರ್ತವ್ಯ. ಇದಕ್ಕೆ ಅಡ್ಡಿಪಡಿಸುವ ಮೂಲಕ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ಅವಮಾನ ಮಾಡಿದೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಸಂವಿಧಾನ ಚೌಕಟ್ಟು ಮೀರಿ ವರ್ತಿಸುತ್ತಿದೆ ಎಂದು ಆಪಾದಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಮಣ್ಣ ಇರಬಗೇರಾ, ನಗರಸಭೆ ಸದಸ್ಯ ಜಯಣ್ಣ, ಸಾಜೀದ ಸಮೀರ, ಮುಖಂಡರಾದ ಕೆ.ಶಾಂತಪ್ಪ, ಅಸ್ಲಂಪಾಷ, ತಾಯಣ್ಣ ನಾಯಕ, ಜಿ.ಶಿವಮೂರ್ತಿ, ತಿಮ್ಮಪ್ಪ, ಅಬ್ದುಲ್ ಕರೀಂ, ಅಮರೇಗೌಡ ಹಂಚಿನಾಳ, ಮಲ್ಲೇಶ, ಮಹಿಳಾ ಘಟಕದ ನಿರ್ಮಲಾ ಬೆಣ್ಣೆ, ಶಶಿಕಲಾ ಭೀಮರಾಯ ಇದ್ದರು.