ಮಾನ್ವಿ: ‘ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿ ಮತ್ತು ಜೀವನಮಟ್ಟ ಸುಧಾರಣೆಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಸದ್ಬಳಕೆ ಅಗತ್ಯ’ ಎಂದು ಪುರಸಭೆಯ ಕಾನೂನು ಸಲಹೆಗಾರ ಎ.ಬಿ.ಉಪ್ಪಳಮಠ ವಕೀಲ ಹೇಳಿದರು.
ಶುಕ್ರವಾರ ಪಟ್ಟಣದ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ದೀನ್ದಯಾಳ್ ಅಂತ್ಯೋದಯ ಹಾಗು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವ್ಯಾಪಾರ ಸಾಮರ್ಥ್ಯ ಹೆಚ್ಚಳ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಬೀದಿ ಬದಿ ವ್ಯಾಪಾರಿಗಳು ಪುರಸಭೆಯ ನಿಯಮಗಳ ಪಾಲನೆಯೊಂದಿಗೆ ವ್ಯಾಪಾರ ಮಾಡಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಕಾನೂನಿನಲ್ಲಿಯೂ ರಕ್ಷಣೆ ಸಿಗುತ್ತದೆ. ಬ್ಯಾಂಕ್ಗಳಿಂದ ಹೆಚ್ಚಿನ ಸಾಲ ಸೌಲಭ್ಯ ಬೇಕಾದಲ್ಲಿ ಹಿಂದೆ ಪಡೆದಿರುವ ಸಕಾಲದಲ್ಲಿ ಮರು ಪಾವತಿ ಮಾಡಬೇಕು’ ಎಂದು ಸಲಹೆ ನೀಡಿದರು.
ಪುರಸಭೆಯ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ ಮಾತನಾಡಿ, ‘ಪಟ್ಟಣದ ಬೀದಿ ಬದಿ ವ್ಯಾಪಾರಿಗಳು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು’ ಎಂದರು.
ಪುರಸಭೆಯ ಅಧ್ಯಕ್ಷೆ ರಶೀದಾ ಬೇಗಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಕೆ.ಶುಕಮುನಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖ್ ಫರೀದ್ ಉಮರಿ, ಮುಖ್ಯಾಧಿಕಾರಿ ಜಗದೀಶ ಬಂಢಾರಿ, ಪ್ರಭಾರಿ ನೈರ್ಮಲ್ಯಾಧಿಕಾರಿ ಈರಣ್ಣ ಮಾನ್ವಿ, ಬೀದಿ ಬದಿ ವ್ಯಾಪಾರಿಗಳಾದ ಬಸವರಾಜ, ಆಂಜನೇಯ, ಶ್ರೀನಿವಾಸ ಬೆಳಗಿನಪೇಟೆ, ನಾಗರಾಜ ಹಾಗೂ ಮತ್ತಿತರರು ಇದ್ದರು.