ಲಿಂಗಸುಗೂರು: ತಾಲ್ಲೂಕಿನ ಸುಕ್ಷೇತ್ರ ಗುರುಗುಂಟಾ ಅಮರೇಶ್ವರ ದೇವಸ್ಥಾನ ಸುತ್ತಮುತ್ತಲ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ನವಿಲುಗಳು ವಾಸವಾಗಿವೆ. ಅವುಗಳ ರಕ್ಷಣೆ ಜೊತೆ ವೀಕ್ಷಣೆಗೆ ಅನುಕೂಲ ಮಾಡಲು ನವಿಲು ಧಾಮ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂಬುದು ಇಲ್ಲಿನ ಯುವಕರ ಒತ್ತಾಸೆಯಾಗಿದೆ.
ತಾಲ್ಲೂಕು ಕೇಂದ್ರದಿಂದ 16 ಕಿ.ಮೀ ಅಂತರದಲ್ಲಿರುವ ಐತಿಹಾಸಿಕ ದೇವಸ್ಥಾನ ಅಮರೇಶ್ವರ ದರ್ಶನಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯದ ಲಕ್ಷಾಂತರ ಭಕ್ತರು ಬಂದು ಹೋಗುತ್ತಾರೆ. ಈ ಪವಿತ್ರ ಸ್ಥಳದಲ್ಲಿ ಈಗಾಗಲೆ ದೈವಿವನ ತಲೆ ಎತ್ತಿದೆ.
ಕಾಯ್ದಿಟ್ಟ ಅರಣ್ಯ ಪ್ರದೇಶದ ಆಯಕಟ್ಟಿನ ಸ್ಥಳಗಳಲ್ಲಿ ನೂರಾರು ನವಿಲುಗಳು ವಾಸಿಸುತ್ತಿವೆ. ಅಲ್ಲದೆ, ದೇವನಹಳ್ಳ, ಕಸಬಾ ಲಿಂಗಸುಗೂರು ಸುತ್ತಮುತ್ತ ಕೂಡ ಸಾಕಷ್ಟು ಪ್ರಮಾಣದ ನವಿಲುಗಳು ಇದ್ದು ರಕ್ಷಣೆ ನಿರ್ಲಕ್ಷ್ಯದಿಂದ ಬೇಟೆಗಾರರ ಕೃತ್ಯಕ್ಕೆ ಬಲಿಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನ ಸಮಿತಿ ಹಾಗೂ ಅರಣ್ಯ ಇಲಾಖೆ ಬೇಟೆಗಾರರ ಆಮಿಷಕ್ಕೆ ಬಲಿಯಾಗುತ್ತಿರುವ ನವಿಲು ಸಂತತಿಯ ಉಳಿಸಿ ಬೆಳೆಸಲು ಮುಂದಾಗಬೇಕು. ದೈವಿವನ ಬಳಿ ನವಿಲು ಧಾಮ ನಿರ್ಮಿಸಿ ಪ್ರವಾಸಿ ತಾಣವೆಂದು ಘೋಷಿಸಬೇಕು ಎಂದು ಪಕ್ಷಿ ಪ್ರಿಯರಾದ ನಾಗರಾಜ, ಆನಂದಯ್ಯ, ವಿಶ್ವನಾಥ, ವೆಂಕನಗೌಡ ಆಗ್ರಹಿಸಿದ್ದಾರೆ.
ಈಗಾಗಲೆ ದೇವಸ್ಥಾನ ಸಮಿತಿ, ಅರಣ್ಯ ಇಲಾಖೆ ಸೇರಿದಂತೆ ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಭವಿಷ್ಯದಲ್ಲಿ ರಾಷ್ಟ್ರೀಯ ಪಕ್ಷಿಗಳನ್ನು ರಕ್ಷಿಸಲು ಮುಂದಾಗದೆ ಹೋದಲ್ಲಿ ಯುವಕರು ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.