ರಾಯಚೂರು: ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಜಿಲ್ಲೆಯ ಕಲಾವಿದರು ಕೆಲಸ ಮಾಡುವ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಮುಖಂಡ ರವೀಂದ್ರ ಜಾಲ್ದಾರ ಹೇಳಿದರು.
ನಗರದ ಜೆ.ಸಿ ಭವನದಲ್ಲಿ ರಾಗ ರಂಜನಿ ಕಲಾ ಬಳಗದಿಂದ ಭಾನುವಾರ ಹಮ್ಮಿಕೊಳ್ಳಲಾದ ಗಾನ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ ಸಂಘಟನೆಯಿಂದ ಹಲವಾರು ಕಲಾವಿದರು ಕಲಾ ಸೇವೆ ಸಲ್ಲಿಸುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಕಲೆ, ಸಾಹಿತ್ಯ, ಸಂಗೀತ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳು ಸ್ಥಗಿತಗೊಂಡ ಕಾರಣ ಅನೇಕ ಸಮಸ್ಯೆ ಎದುರಿಸುವಂತಾಗಿದೆ. ಆದರೆ ಜಿಲ್ಲೆಯ ಎಲ್ಲಾ ಕಲಾವಿದರು ಒಂದಾಗಿ ಸಂಘ ರಚನೆ ಮಾಡಿಕೊಂಡು ಸಾಂಸ್ಕೃತಿಕ ಮೆರವು ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಕಲಾವಿದ ಶರಣಪ್ಪ ಗೋನಾಳ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕ್ಷೇತ್ರ ಸ್ತಬ್ದವಾಗಿ ಕಲಾವಿದರಿಗೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ಧಾರೆ. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಎಲ್ಲಾ ಕಲಾವಿದರು ಒಟ್ಟಾಗಿ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಕಲಾವಿದರ ಸಂಘದ ಗೌರವ ಅಧ್ಯಕ್ಷ ವೆಂಕಟೇಶ ಆಲ್ಕೋಡ, ಸುಗುರೇಶ ಅಸ್ಕಿಹಾಳ, ವೀರೇಂದ್ರ ಪಾಟೀಲ, ಮಹಾಲಕ್ಷ್ಮೀ, ಮೋಹನ ವಕೀಲ, ನಜೀರ ಸಾಬ್, ಹನುಮಯ್ಯ ನಾಯಕ, ಅನ್ನಪೂರ್ಣ ಮತ್ತಿತರರು ಇದ್ದರು.