ದೇವದುರ್ಗ: ತಾಲ್ಲೂಕಿನ ನಾಗೋಲಿ ಗ್ರಾಮದ ದ್ಯಾವಮ್ಮ ದೇವಿ ಬೀರಲಿಂಗೇಶ್ವರ ಮತ್ತು ಬಸವೇಶ್ವರ ದೇವಸ್ಥಾನದಲ್ಲಿ ಪ್ರತ್ಯೇಕವಾಗಿ ಕಳ್ಳತನ ಮಾಡಿ ಪರಾರಿಯಾಗುವ ವೇಳೆ ಕಳ್ಳನನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ.
ದ್ಯಾವಮ್ಮ ದೇವಿ ದೇವಸ್ಥಾನದ ಆಭರಣಗಳನ್ನು ಕಳ್ಳತನ ಮಾಡುವ ವೇಳೆ ಹುಸೇನಿ (35) ಎಂಬಾತನನ್ನು ಹಿಡಿದು ರಾತ್ರಿಯಿಡೀ ಕಂಬಕ್ಕೆ ಕಟ್ಟಿ ಹಾಕಿದ ಗ್ರಾಮಸ್ಥರು ಸಾರ್ವಜನಿಕವಾಗಿ ಥಳಿಸಿದ್ದಾರೆ. ತಪ್ಪಿಸಿಕೊಂಡ ಶರಣಬಸವ (30) ಮತ್ತು ವೀರಸ್ವಾಮಿ (34) ಇಬ್ಬರು ಕಳ್ಳರು ಸೇರಿ 3 ಜನ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದವರು ಎಂದು ತಿಳಿದುಬಂದಿದೆ.
ಶರಣಬಸವನಿಗೆ ಬೀರಲಿಂಗೇಶ್ವರ ದೇವಸ್ಥಾನದ 50 ಗ್ರಾಂ ಬೆಳ್ಳಿಯ ಆಭರಣ ನೀಡಿದ್ದೇನೆ ಎಂದು ಸಿಕ್ಕಿಬಿದ್ದ ಕಳ್ಳ ಒಪ್ಪಿಕೊಂಡಿದ್ದಾನೆ. ದ್ಯಾವಮ್ಮ ದೇವಿ ದೇವಸ್ಥಾನದ ₹4 ಲಕ್ಷ ಮೊತ್ತದ ಚಿನ್ನದ ತಾಳಿ, ಬೀರಲಿಂಗೇಶ್ವರ ದೇವಸ್ಥಾನದಲ್ಲಿನ ₹5 ಲಕ್ಷ ಬೆಲೆಬಾಳುವ ಬೆಳ್ಳಿಯ ಆಭರಣಗಳು ಕದಿಯಲು ಯತ್ನಿಸಿದ್ದಾರೆ. ಕೆಲ ಬಂಗಾರದ ಆಭರಣಗಳು ಊರಿನ ಹೊರವಲಯದಲ್ಲಿ ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡು ನಂತರ ಗ್ರಾಮಸ್ಥರಿಗೆ ಮರಳಿ ನೀಡಿದ್ದಾರೆ.
ಸುಮಾರು ₹4 ಲಕ್ಷಕ್ಕೂ ಅಧಿಕ ಬೆಲೆಬಾಳುವ ಆಭರಣಗಳನ್ನು ಕದ್ದು ಪರಾರಿಯಾಗಿರುವ ಕಳ್ಳರು ಬದಲಿಗೆ ನೀವೇ ದಂಡ ಕಟ್ಟಿ ಬಿಡಿಸಿಕೊಂಡು ಹೋಗುವಂತೆ ಗ್ರಾಮಸ್ಥರು ಸಿಕ್ಕಿಬಿದ್ದ ಕಳ್ಳನ ಕುಟುಂಬಸ್ಥರಿಗೆ ಪಟ್ಟು ಹಿಡಿದಿದ್ದಾರೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ದೇವದುರ್ಗ ತಾಲ್ಲೂಕಿನ ನಾಗೋಲಿ ಗ್ರಾಮದಲ್ಲಿ ದ್ಯಾವಮ್ಮ ದೇವಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದ ಆರೋಪಿ ಹುಸೇನಿ ಎಂಬಾತನನ್ನು ಕಂಬಕ್ಕೆ ಕಟ್ಟಿ ಥಳಿಸುತ್ತಿರುವ ಗ್ರಾಮಸ್ಥರು