ಸಿರವಾರ (ರಾಯಚೂರು ಜಿಲ್ಲೆ): ತಾಲ್ಲೂಕಿನ ನವಲಕಲ್ಲು ಹೊರವಲಯದ ಜಮೀನೊಂದರಲ್ಲಿ ಶನಿವಾರ ಕರಡಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಗ್ರಾಮದ ರೈತರು ಭತ್ತದ ಮೇವು ತೆಗೆದುಕೊಳ್ಳಲು ಜಮೀನಿಗೆ ತೆರಳುವಾಗ ಟ್ರ್ಯಾಕ್ಟರ್ ಶಬ್ದಕ್ಕೆ ಕರಡಿ ಓಡಿ ಹೋಗುತ್ತಿರುವುದನ್ನು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ. ಇದೇ ಮೊದಲ ಸಲ ಕರಡಿ ಕಾಣಿಸಿಕೊಂಡಿದ್ದು, ಅಚ್ಚರಿಯಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೀಕ್ಷಿಸುತ್ತಿದ್ದಾರೆ.
ಗ್ರಾಮಕ್ಕೆ ಹೊಂದಿಕೊಂಡು ಕಲ್ಲಿನ ಗುಡ್ಡಗಳಿದ್ದು, ಅದರಲ್ಲಿಯೇ ಕರಡಿ ವಾಸ ಮಾಡಿಕೊಂಡಿರಬಹುದು ಎಂದು ಜನರು ಚರ್ಚಿಸುತ್ತಿದ್ದಾರೆ. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜೇಶ ನಾಯಕ ಭೇಟಿ ನೀಡಿ ಪರಿಶೀಲಿಸಿದ್ದು, ಯಾವುದೇ ಆತಂಕ ಅವಶ್ಯಕತೆ ಇಲ್ಲ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.