ರಾಯಚೂರು: ಭಾರತೀಯ ಮೂಲದ ಯೋಗಾಸನಗಳನ್ನು ಜಗತ್ತೆ ತಲೆ ಬಾಗಿದೆ. ಯೋಗಭ್ಯಾಸದಿಂದ ಮನೋಬಲ ವೃದ್ಧಿಯಾಗುತ್ತದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ ಅಭಿಪ್ರಾಯ ಪಟ್ಟರು.
ಜಿಲ್ಲಾ ಆಯುಷ್ ಇಲಾಖೆ, ಬಿ. ಎನ್. ಡಬ್ಲ್ಯೂ. ಪತಂಜಲಿ ಯೋಗ ಪ್ರತಿಷ್ಠಾನ ಟ್ರಸ್ಟ್ ಮತ್ತು ಜನ ಶಿಕ್ಷಣ ಸಂಸ್ಥಾನದ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಆಯೋಜಿಸಿದ್ದ ‘ವಿಶ್ವ ಯೋಗ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿರು.
ಯೋಗಾಸನ ಮಾಡುವುದರಿಂದ ದೇಹ ಸದೃಢವಾಗುವುದರ ಜತೆಗೆ ಮನೋಬಲವೃದ್ಧಿಯಾಗುತ್ತದೆ. ಯೋಗವನ್ನು ವಯಸ್ಸಿನ ಆಧಾರಾದ ಮೇಲೆ ಆಯ್ಕೆ ಮಾಡಿಕೊಳ್ಳಬೇಕು. ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಂಡು ಮಾನಸಿಕ ನೆಮ್ಮದಿ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಬಸವರಾಜ ಕಟ್ಟಿ ಮಾತನಾಡಿದರು. ಯೋಗ ಗುರು ಡಾ. ತಿಮ್ಮಪ್ಪ ಎನ್. ವಡ್ಡೇಪಲ್ಲಿ ಮಾತನಾಡಿ, ವೈದ್ಯಕೀಯ ಚಿಕಿತ್ಸೆ ರೋಗಕ್ಕೆ ಮಾತ್ರ ಚಿಕಿತ್ಸೆ ನೀಡಿದರೆ ಯೋಗವು ಇಡೀ ಜೀವನದಲ್ಲಿ ಉತ್ತಮ ಬದುಕಿಗೆ ಚಿಕಿತ್ಸೆ ನೀಡುತ್ತಿದೆ ಎಂದರು.
ಇದೇ ವೇಳೆ ಜನ ಶಿಕ್ಷಣ ಸಂಸ್ಥಾನಯಿಂದ ಡಾ. ತಿಮ್ಮಪ್ಪ ಎನ್. ವಡ್ಡೇಪಲ್ಲಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಕಾರಾಗೃಹದ ಅಧೀಕ್ಷಕ ಬಿ.ಆರ್.ಅಂದಾನಿ, ಆಯುಷ್ ಇಲಾಖೆಯ ಡಾ.ನವೀನ್, ಡಾ.ಕನಕಲಕ್ಷ್ಮಿ, ಡಾ.ಅರುಣಾ, ಜನ ಶಿಕ್ಷಣ ಸಂಸ್ಥಾನದ ಅಧಿಕಾರಿ ಸತೀಶ ಇದ್ದರು.