ದೇವದುರ್ಗ: ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ‘ಟಿ.ಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ’ ಅಭಿಯಾನದ ಅಂಗವಾಗಿ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕ್ಷಯರೋಗದ ಅರಿವು ಕಾರ್ಯಕ್ರಮವನ್ನು ಕ್ಷಯರೋಗ ಹಿರಿಯ ಮೇಲ್ವಿಚಾರಕ ರವಿ ಶುಕ್ಲ ಉದ್ಘಾಟಿಸಿ, ಮಾತನಾಡಿದರು.
ಕ್ಷಯ ರೋಗ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಇಲಾಖೆಯೊಂದಿಗೆ ಕೈ ಜೋಡಿಸಿ ಕ್ಷಯ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಕ್ಷಯದ ಲಕ್ಷಣಗಳಾದ ಸತತ ಕೆಮ್ಮು, ಸಂಜೆ ವೇಳೆ ಜ್ವರ, ಬೆವರುವುದು, ಹಸಿವಾಗದಿರುವುದು, ತೂಕ ಕಡಿಮೆ ಆಗುವುದು, ಕಫದಲ್ಲಿ ರಕ್ತ ಕಾಣಿಸುವುದು ಕಂಡು ಬಂದರೆ ಕೂಡಲೆ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದರು.
ಒಂದು ವೇಳೆ ಕ್ಷಯ ರೋಗ ಪತ್ತೆಯಾದರೆ ಉಚಿತ ಚಿಕಿತ್ಸೆ ಹಾಗೂ 6 ತಿಂಗಳ ಅಥವಾ ಹೆಚ್ಚಿನ ಅವಧಿಯ ಚಿಕಿತ್ಸೆ ಜತೆಗೆ ಪೋಷಣ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ₹ 500 ಫಲಾನುಭವಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದರು.
ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಮಲೇರಿಯಾ ಮೇಲ್ವಿಚಾರಕ ಓಂಕಾರ ಜಾಂತಿಕರ್, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಚನ್ನಬಸಯ್ಯ, ಕ್ಷಯ ಮೇಲ್ವಿಚಾರಕ ಭೀಮೇಶ, ಉಪನ್ಯಾಸಕ ದಿಲಿಪಕುಮಾರ್, ಶರಣಗೌಡ, ಶಿವಶರಣಪ್ಪ, ಮಲ್ಲಿಕಾರ್ಜುನ್, ವಿದ್ಯಾರ್ಥಿಗಳು ಇದ್ದರು.