ರಾಯಚೂರು: ಧರ್ಮ ಆಧಾರಿತವಾಗಿ ವಲಸಿಗರಿಗೆ ಪೌರತ್ವ ತಿದ್ದುಪಡಿ ವಿಧೇಯಕ ಅಂಗೀಕಾರಗೊಳಿಸಿರುವ ಕೇಂದ್ರದ ಬಿಜೆಪಿ ಸರ್ಕಾರದ ಕೋಮು ನೀತಿಯನ್ನು ವಿರೋಧಿಸಿ ಸಿಪಿಐ(ಎಂಎಲ್) ಜಿಲ್ಲಾ ಸಮಿತಿಯಿಂದ ವಿಧೇಯಕದ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ವೃತ್ತದಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ದೇಶವನ್ನು ವಿಭಜಿಸುವ ದುರುದ್ದೇಶದಿಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು ಹಾಗೂ ಮುಸ್ಲಿಂಮೇತರಿರಗೆ ಮಾತ್ರ ಶಾಶ್ವತ ಪೌರತ್ವ ನೀಡಿ ಮುಸ್ಲಿಂ ವಲಸಿಗರಿಗೆ ದುರುದ್ದೇಶ ಪೂರಕವಾಗಿ ಹೊರಗಿಟ್ಟಿರುವುದು ಸಂವಿಧಾನ ವಿರೋಧಿ ಧೋರಣೆಯಾಗಿದೆ ಎಂದು ದೂರಿದರು.
ಅಸ್ಸಾಂ, ಗುವಾಹಟಿ ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ ವಾಸ ಮಾಡುತ್ತಿರುವ ವಲಸಿಗರು ಬದುಕು ಅತಂತ್ರಗೊಳಿಸುವ ಹುನ್ನಾರ ಬಿಜೆಪಿ ಸರ್ಕಾರ ಮಾಡಿದೆ. ದೇಶದ ಮುಸ್ಲಿಮರಿಗೆ ಯಾವುದೇ ಆತಂಕವಿಲ್ಲ ಎಂಬ ಭರವಸೆ ನೀಡಿ ಈಗಾಗಲೇ ರಕ್ಷಣೆಗೆ ನೆಲಸಿರುವ ವಲಸಿಗರನ್ನು ದೇಶದ ಹೊರ ದಬ್ಬುವ ಮೂಲಕ ಸಮಾಜದಲ್ಲಿ ಕೋಮುಭಾವನೆ ಬೆಳೆಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಸಿಪಿಐ(ಎಂಎಲ್) ಕಾರ್ಯದರ್ಶಿ ಕೆ.ನಾಗಲಿಂಗಸ್ವಾಮಿ, ಟಿಯುಸಿಐ ಜಿಲ್ಲಾಧ್ಯಕ್ಷ ಜಿ.ಅಮರೇಶ, ಜನ ಸಂಗ್ರಾಮ ಪರಿಷತ್ನ ಖಾಜಾ ಅಸ್ಲಂ ಪಾಷಾ, ರವಿದಾದಾಸ್, ವೇಲ್ಫೇರ್ ಪಾರ್ಟಿ ಮುಖಂಡ ಅಜೀಜ್ ಜಹಾಗೀರದಾರ, ಜನಶಕ್ತಿ ಪಕ್ಷದ ಆಂಜಿನೇಯ, ಶಿವಯ್ಯ, ಶಶಿ, ವೀರಭದ್ರ, ರವಿಚಂದ್ರ ಇದ್ದರು.