ದೇವದುರ್ಗ: ನಾರಾಯಣಪುರ ಬಲದಂಡೆ ಕಾಲುವೆಗೆ ಏ. 10ರವರೆಗೂ ನೀರು ಹರಿಸುವುದು, ಕಾಲುವೆಗೆ ಭೂಮಿ ಕಳೆದುಕೊಂಡ ರೈತರಿಗೆ ಭೂಪರಿಹಾರ ನೀಡುವುದು ಸೇರಿದಂತೆ ಇತರ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಶುಕ್ರವಾರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಶುಕ್ರವಾರ ಸಂಘದ ಮುಖಂಡರು ಮತ್ತು ವಿವಿಧ ಗ್ರಾಮಗಳಿಂದ ರೈತರು ಬೇಡಿಕೆಗಳ ಮನವಿ ಪತ್ರವನ್ನು ಶಿರಸ್ತೆದಾರ ಶ್ರೀನಿವಾಸ ಚಾಪೆಲ್ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.
ಬೇಡಿಕೆ:ಫಸಲ್ ಭೀಮಾ ಯೋಜನೆ ಅಡಿಯಲ್ಲಿ ವಿಮಾ ಹಣ ಪಾವತಿಸಿದ ಎಲ್ಲ ರೈತರಿಗೂ ಕೂಡಲೇ ಪರಿಹಾರ ನೀಡಬೇಕು, ನಾರಾಯಣಪುರ ಬಲದಂಡೆ ಕಾಲುವೆಗೆ ಏಪ್ರೀಲ್ 10ರವರೆಗೆ ನೀರು ಹರಿಸಬೇಕು, ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಕೂಡಲೇ ಪರಿಹಾರ ನೀಡಬೇಕು, ತಾಲ್ಲೂಕಿನ ಎಲ್ಲ ರೈತರಿಗೂ 2018ರ ಹಿಂಗಾರು ಹಂಗಾಮಿನ ಬೆಳೆನಷ್ಟ ಪರಿಹಾರ ನೀಡಬೇಕು, ನೆರೆ ಸಂತ್ರಸ್ತರಿಗೆ ಕೂಡಲೇ ಪುನರ್ವಸತಿ ಕಲ್ಪಿಸಬೇಕು, ಬೆಳೆ ನಷ್ಟ ಹೊಂದಿದ ರೈತರಿಗೆ ಎಕರೆಗೆ ₹ 20 ಸಾವಿರ ಬೆಳೆ ಪರಿಹಾರ ನೀಡಬೇಕು ಮತ್ತು ಫಸಲ್ ಭೀಮಾ ಯೋಜನೆ ಅಡಿಯಲ್ಲಿ ನೋಂದಾಣಿಕೊಂಡ ರೈತರ ಹೆಸರಿಗೆ ಕೂಡಲೇ ವಿಮಾ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಬೂದಯ್ಯ ಸ್ವಾಮಿ ಗಬ್ಬೂರು, ಬೆಟ್ಟನಗೌಡ, ಅಗ್ರಹಾರ, ಮಲ್ಲಪ್ಪಗೌಡ ಗಬ್ಬೂರು, ಬಸನಗೌಡ ಅಗ್ರಹಾರ, ಉಮಾಪತಿಗೌಡ ನಗರಗುಂಡ, ಶಿವನಗೌಡ ಹೂವಿನಹೆಡ್ಗಿ, ರಾಮನಗೌಡ ಗಣೇಕಲ್ ಹಾಗೂ ಇತರರು ಇದ್ದರು.