ಹಟ್ಟಿ ಚಿನ್ನದಗಣಿ: ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ಬೆಟ್ಟಗಳಲ್ಲಿ ಬೆಳೆದಿರುವ ಸೀತಾಫಲ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ.
ಈ ಹಣ್ಣುಗಳನ್ನು ಖರೀದಿಸಲು ವ್ಯಾಪಾರಸ್ಧರು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಕಳೆದ ವರ್ಷ ಮಳೆ ಕೊರತೆಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ರೈತರು, ಈ ಬಾರಿ ಸೀತಾಫಲಕ್ಕೆ ಬೇಡಿಕೆ ಹೆಚ್ಚಿದ್ದರಿಂದಾಗಿ ಉತ್ತಮ ಲಾಭಗಳಿಸುವ ನಿರೀಕ್ಷೆಯಲ್ಲಿ ಇದ್ದಾರೆ.
ಹಿಂಗಾರು ಮಳೆ ಆರಂಭವಾಗುತ್ತಿದ್ದತೆಯೇ ಹೂ ಬಿಟ್ಟು ಘಮಘಮ ವಾಸನೇ ಬೀರುವ ಸೀತಾಫಲ ಗಿಡಗಳು ಅಕ್ಟೋಬರ್ನಲ್ಲಿ ಫಲ ಬಿಡುತ್ತವೆ. ಮಹಾಲಯ ಮತ್ತು ದೀಪಾವಳಿಯ ವಿಶೇಷ ಪೂಜೆಗಾಗಿ ಸೀತಾಫಲ ಖರೀದಿಗೆ ದೂರದ ಊರುಗಳಿಂದ ಇಲ್ಲಿಗೆ ಬರುತ್ತಾರೆ.
ಗುರುಗುಂಟಾ, ಯಲಗಟ್ಟಾ, ಯರಜಂತಿ, ಗೋಲಪಲ್ಲಿ ಗುಡ್ಡದಲ್ಲಿ ಸಾವಿರಾರು ಸೀತಾಫಲ ಗಿಡಗಳು ನೈಸರ್ಗಿಕವಾಗಿ ಬೆಳೆದಿವೆ. ಸೀತಾಫಲ ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಪೌಷ್ಟಿಕಯುಕ್ತ ಹಣ್ಣಾಗಿದೆ. ಅಕ್ಟೋಬರ್ದಿಂದ ಡಿಸೆಂಬರ್ ತನಕ ಈ ಹಣ್ಣುಗಳು ತಿನ್ನಲು ಉತ್ತಮವಾಗಿರುತ್ತವೆ.
ಬೆಟ್ಟಗಳಲ್ಲಿ ಕಲ್ಲಿನ ಸಂದಿಗಳಲ್ಲಿ ಬೆಳೆದಿರುವ ಸೀತಾಫಲ ಹಣ್ಣುಗಳನ್ನು ರೈತರು ಕೀಳಿಸಿ ನೆರೆಯ ಜಿಲ್ಲೆಗಳಿಗೆ ಕಳುಹಿಸುತ್ತಾರೆ. ಹಣ್ಣುಗಳು ರುಚಿ ಹೊಂದಿರುವುದರಿಂದ ಬೇಡಿಕೆ ಹೆಚ್ಚಿದೆ. ಬೆಟ್ಟದಲ್ಲಿನ ಸೀತಾಫಲ ಗಿಡಗಳನ್ನು ಕೆಲ ಕಿಡಿಗೇಡಿಗಳು ಕಡಿಯುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಈ ಗಿಡಗಳು ನಾಶವಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ನಾಗರಿಕರ ಒತ್ತಾಯಿಸುತ್ತಾರೆ.
ಬೆಟ್ಟಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಸೀತಾಫಲ ಹಣ್ಣು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಬಹಳ ರುಚಿಕರವಾಗಿರುತ್ತದೆ ಎನ್ನುತ್ತಾರೆ ಗೃಹಿಣಿ ಜಯಶ್ರೀ ನಾಯಕ.