ಕವಿತಾಳ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಹುಜನ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಎರಡು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಧಿಕಾರಿಗಳ ಭರವಸೆ ಮೇರೆಗೆ ಶುಕ್ರವಾರ ಕೈ ಬಿಟ್ಟರು.
ತ್ರಯಂಭಕೇಶ್ವರ ದೇವಸ್ಥಾನದ ಹಿಂಬದಿ ಜಾಗದ ಅತಿಕ್ರಮಣ ತಡೆಯುವುದು, ಮುಖ್ಯಾಧಿಕಾರಿ ವಿರುದ್ದ ಕ್ರಮ ಕೈಗೊಳ್ಳುವುದು, ವಿವಿಧ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ, ವಾರ್ಡ್ಗಳಲ್ಲಿನ ನೀರಿನ ಸಮಸ್ಯೆ, ಚರಂಡಿ ಸ್ವಚ್ಛತೆ ಮತ್ತು ಬೀದಿ ದೀಪಗಳ ಅಳವಡಿಕೆ, ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಲಾಯಿತು.
ಹತ್ತು ದಿನಗಳಲ್ಲಿ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ಉಪ ತಹಶೀಲ್ದಾರ ಶಕೀಲ್ ಅಹ್ಮದ್ ಭರವಸೆ ನೀಡಿದ್ದು, ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಮುಖಂಡ ಅಲ್ಲಮಪ್ರಭು ಹೇಳಿದರು.
ಮುಖ್ಯಾಧಿಕಾರಿ ಜಗಧೀಶ್ ಭಂಡಾರಿ, ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಣ್ಣ ಕವಿತಾಳ, ವಿಶ್ವನಾಥ ಕಾಮರಡ್ಡಿ, ಸಿದ್ದಪ್ಪ ಬುಳ್ಳಾಪುರ, ವಿಜಯ ಕಡತಲ್, ಸಂತೋಷ್, ಮೌನೇಶ ಕೊಡ್ಲಿ, ಮೌನೇಶ ಹಿರೇಕುರಬರ್, ಈರಣ್ಣ ಕೆಳಗೇರಿ, ಯಾಕೂಬ್ ಉಪಸ್ಥಿತರಿದ್ದರು.