ರಾಯಚೂರು: ಸಮಾಜದಲ್ಲಿ ಬದುಕಲು ಶಿಕ್ಷಣಕ್ಕೆ ಒತ್ತು ನೀಡುವುದು ಅಗತ್ಯವಾಗಿದ್ದು, ಶೈಕ್ಷಣಿಕವಾಗಿ ಹಿಂದುಳಿದಿರುವ ಉಪ್ಪಾರ ಸಮಾಜದವರು ಶಿಕ್ಷಣಕ್ಕೆ ಒತ್ತು ನೀಡಿ ಬೆಳವಣಿಗೆ ಹೊಂದಬೇಕು ಎಂದು ದೇವದುರ್ಗ ತಾಲ್ಲೂಕಿನ ಮಲದಕಲ್ ನಿಜಾನಂದ ಯೋಗಾಶ್ರಮದ ಗುರುಬಸವ ರಾಜಗುರು ಹೇಳಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ರಾಜ್ಯದಲ್ಲಿ 45 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜದಲ್ಲಿ ಸಂಘಟನೆಯ ಕೊರತೆಯಿದೆ. ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಸಮಾಜದವರು ಸಂಘಟಿತರಾಗಿ ಅಭಿವದ್ಧಿಯೆಡೆಗೆ ಹೆಜ್ಜೆ ಹಾಕಬೇಕು ಎಂದರು.
ಭಗೀರಥ ಮಹರ್ಷಿ 32 ವರ್ಷಗಳ ಕಾಲ ರಾಜ್ಯವಾಳಿದ್ದಾರೆ ಎಂಬ ಉಲ್ಲೇಖವಿದ್ದು, ಅವರ ಆಚಾರ, ವಿಚಾರ ಹಾಗೂ ತತ್ವ ಅಜರಾಮರವಾಗಿದೆ. ಸರ್ಕಾರದಿಂದ 5ನೇ ವರ್ಷದ ಜಯಂತಿ ಕಾರ್ಯಕ್ರಮ ಆಚರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿರುವುದು ಬೇಸರದ ಸಂಗತಿಯಾಗಿದೆ. ಈ ಜಯಂತಿ ಹಳ್ಳಿ ಹಳ್ಳಿಗಳಿಗೆ ವಿಸ್ತಾರವಾಗಲಿ ಎಂದು ತಿಳಿಸಿದರು.
ಯಾವ ವ್ಯಕ್ತಿ ಅವಮಾನ ಸಹಿಸಿಕೊಂಡು ಕಾರ್ಯನಿರ್ವಹಿಸುತ್ತಾನೊ ಅವನು ಒಂದಲ್ಲ ಒಂದು ದಿನ ಸನ್ಮಾನ ಮಾಡಿಸಿಕೊಳ್ಳುತ್ತಾನೆ. ಕಾಯಕದಲ್ಲಿ ತೃಪ್ತಿ ಇರಬೇಕು. ಆತ್ಮತೃಪ್ತಿಗಾಗಿ ಕೆಲಸ ಮಾಡಿದ ವ್ಯಕ್ತಿ ಮಹಾತ್ಮನಾಗುತ್ತಾನೆ ಎಂದರು.
ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ವೆಂಕೋಬ ಉಪ್ಪಾರ, ಪ್ರಧಾನ ಕಾರ್ಯದರ್ಶಿ ಗಟ್ಟು ಶ್ರೀನಿವಾಸ, ಮಹಿಳಾ ಅಧ್ಯಕ್ಷೆ ಪಿ.ಸುರೇಖಾ, ಜೂಕುರು ಶ್ರೀನಿವಾಸ, ರೊಟ್ಲ್ ಶ್ರೀನಿವಾಸ, ಬಿ.ಗೀರಣ್ಣ, ಮಿರ್ಜಾಪೂರ ಪಾಗುಂಟಪ್ಪ, ಎಲ್.ಬಿ.ಅಗ್ನಿ ಇದ್ದರು.