ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ದರದಲ್ಲಿ ಕಡಿತ: ರೈತರ ಪ್ರತಿಭಟನೆ

Last Updated 29 ಜನವರಿ 2021, 13:51 IST
ಅಕ್ಷರ ಗಾತ್ರ

ರಾಯಚೂರು: ಮಾರುಕಟ್ಟೆಯಲ್ಲಿ ಹತ್ತಿ ದರ ನಿಗದಿಪಡಿಸಿದ ನಂತರ ಪುನಃ ಕ್ವಿಂಟಲ್‌ಗೆ ₹ 100ರಿಂದ ₹ 150ವರೆಗೆ ಕಡಿಮೆ ಮಾಡುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಗಂಜ್ ವೃತ್ತದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ(ಎಪಿಎಮ್ ಸಿ) ಕಚೇರಿವರೆಗೆ ಶುಕ್ರವಾರ ಮೆರವಣಿಗೆನಡೆಸಿದರು.

ಆನಂತರ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. ರಾಯಚೂರು ಹತ್ತಿ ಮಾರುಕಟ್ಟೆಯಲ್ಲಿ ಹತ್ತಿ ನೋಡಿದ ಬಳಿಕ ದರ ನಿಗದಿ ಮಾಡಲಾಗುತ್ತದೆ. ಆನಂತರ ಮಿಲ್‌ಗೆ ತೆಗೆದುಕೊಂಡು ಹೋದ ಮೇಲೆ ಮತ್ತೊಮ್ಮೆ ಕ್ವಿಂಟಲ್‌ಗೆ ₹ 150 ಕಡಿಮೆ ಮಾಡಿ ಬಿಲ್ ಮಾಡುತ್ತಾರೆ. ಇದನ್ನು ರೈತರು ಪ್ರಶ್ನೆ ಮಾಡಿದರೆ ಹತ್ತಿ ವಾಪಸ್ ತೆಗೆದುಕೊಂಡು ಹೋಗುವಂತೆ ಬೆದರಿಕೆ ಹಾಕುತ್ತಾರೆ. ಇದರಿಂದ ರೈತರು ಅನಿವಾರ್ಯವಾಗಿ ನಷ್ಟ ಅನುಭವಿಸಬೇಕಾಗಿದೆ. ಈ ಬಗ್ಗೆ ಆಡಳಿತ ಮಂಡಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು.

ರೈತರಿಂದ ತೊಗರಿ, ಕಡಲೆ ಸ್ಯಾಂಪಲ್ ತೆಗೆದುಕೊಂಡು ಹೋಗುವುದನ್ನು ತಕ್ಷಣವೇ ರದ್ದುಪಡಿಸಬೇಕು. ಕಾರ್ಖಾನೆಗಳಿಗೆ ತೆಗೆದುಕೊಂಡ ಹೋದ ಹತ್ತಿಯ ಅನ್ ಲೋಡಿಂಗ್ ವೆಚ್ಚಗಳನ್ನು ರೈತರ ಮೇಲೆ ಹಾಕುತ್ತಿದ್ದು ಈ ವೆಚ್ಚವನ್ನು ವ್ಯಾಪಾರಸ್ಥರು ಭರಿಸಲು ಸೂಚನೆ ನೀಡಬೇಕು. ಹತ್ತಿಗೆ ದರ ನಿಗದಿಪಡಿಸಿದ ನಂತರ ಯಾವುದೇ ವ್ಯತ್ಯಾಸ ಮಾಡಬಾರದು ಎಂದು ಸೂಚನೆ ನೀಡಬೇಕು. ಇದನ್ನು ಸರಿಪಡಿಸದಿದ್ದರೆ ರೈತರೊಂದಿಗೆ ಎಪಿಎಂಸಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ, ಮಲ್ಲಪ್ಪ, ಸಾಬಣ್ಣ, ಶಿವರಾಜ, ನರಸಪ್ಪ ಹೊಕ್ರಾಣಿ, ಹುಲಿಗೆಪ್ಪ ಜಾಲಿಬೆಂಚಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT