ಮಾನ್ವಿ: ತುಂಗಭದ್ರಾ ಎಡದಂಡೆ ನಾಲೆಯ 89ನೇ ವಿತರಣಾ ಕಾಲುವೆ ಕೊನೆಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಲು ಒತ್ತಾಯಿಸಿ ನೂರಾರು ರೈತರು ನೀರಮಾನ್ವಿ ಗ್ರಾಮದಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ವಿತರಣಾ ಕಾಲುವೆ 89ರ ವ್ಯಾಪ್ತಿಯ ಗ್ರಾಮಗಳ ರೈತರು ಬೆಳೆದ ಭತ್ತ, ಮೆಣಸಿನಕಾಯಿ, ಹತ್ತಿ, ಜೋಳ ಇತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕೂಡಲೇ ನಿರಂತರವಾಗಿ ಕಾಲುವೆಗೆ ನೀರು ಹರಿಸುವಂತೆ ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.
ತಹಶೀಲ್ದಾರ್ ರಾಜು ಪಿರಂಗಿ, ಎಇಇ ರಶೀದ್ ಖಾನ್ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತ ರೈತರ ಜತೆಗೆ ಚರ್ಚಿಸಿದರು.
ತಹಶೀಲ್ದಾರ್ ರಾಜು ಮಾತನಾಡಿ, ‘ನಂ.89ನೇ ವಿತರಣಾ ಕಾಲುವೆ ವ್ಯಾಪ್ತಿಯ ಕೊನೆಭಾಗದ ವ್ಯಾಪ್ತಿಯ ಜಮೀನುಗಳಿಗೆ ಸಮರ್ಪಕವಾಗಿ ಕಾಲುವೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.